ಬೆಂಗಳೂರು: ‘ಜಗತ್ತಿನ ಜ್ಞಾನ ವಾಹಿನಿಗಳಾದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡಬೇಕು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.
‘ಅನಿಮಲ್ ಪ್ಲಾನೆಟ್ ಸೇರಿ ವಿವಿಧ ಜ್ಞಾನ ವಾಹಿನಿಗಳು ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಪ್ರಸಾರವಾಗುತ್ತಿವೆ. ಭೂ ಜೀವ ಜಗತ್ತಿನ ಅಚ್ಚರಿಯ ವಿಷಯಗಳು ಪ್ರಾದೇಶಿಕ ಭಾಷೆಗಳಲ್ಲಿ ದೊರಕುತ್ತಿವೆ. ಜೀವಜಗತ್ತಿನ ಅದ್ಭುತ, ವೈಚಿತ್ರ್ಯಗಳನ್ನು ಜನರು ಮಾತೃಭಾಷೆಗಳಲ್ಲಿ ಅರಿತುಕೊಳ್ಳುವ ಅನಿವಾರ್ಯ ಇದೆ. ಆದರೆ, ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿ ಕನ್ನಡ ಭಾಷೆಯಲ್ಲಿ ಪ್ರಸಾರವಾಗದೇ ಇರುವುರಿಂದ ಜೀವ ವೈವಿಧ್ಯದ ಜ್ಞಾನ ಕನ್ನಡಿಗರನ್ನು ತಲುಪುತ್ತಿಲ್ಲ’ ಎಂದು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
‘ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಜಗತ್ತಿನಲ್ಲಿ ಅವರವರ ಮಾತೃಭಾಷೆಯಲ್ಲಿಯೇ ಸೇವೆಗಳು ಮತ್ತು ಮಾಹಿತಿಗಳು ಲಭಿಸುತ್ತಿವೆ. ಆದ್ದರಿಂದ ಜ್ಞಾನ ವಾಹಿನಿಗಳು ಕನ್ನಡದಲ್ಲಿಯೇ ಸೇವೆ ಒದಗಿಸಬಹುದಾಗಿದೆ. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ, ಶಾಸ್ತ್ರೀಯ ಸ್ಥಾನಮಾನ ಹೊಂದಿದ್ದು, 6 ಕೋಟಿಗೂ ಅಧಿಕ ಜನ ಮಾತನಾಡುತ್ತಾರೆ. ಆದ್ದರಿಂದ ಕನ್ನಡದಲ್ಲಿಯೂ ಜ್ಞಾನ ವಾಹಿನಿಗಳು ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಭೂ ಜಗತ್ತಿನ ವಿಸ್ಮಯಗಳನ್ನು ತಮ್ಮ ಭಾಷೆಯಲ್ಲಿ ತಿಳಿದುಕೊಳ್ಳುವ ಅವಕಾಶವನ್ನು ಕನ್ನಡಿಗರಿಗೂ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.