ಬೆಂಗಳೂರು: ‘ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ ಪಠ್ಯದ ಆಶಯ ಸಾಕಾರಗೊಳ್ಳಬೇಕಾದರೆ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ. ‘ತಾಂತ್ರಿಕ ಶಿಕ್ಷಣ ಪಠ್ಯವನ್ನು ಕನ್ನಡದಲ್ಲಿಯೂ ಮುದ್ರಿಸಿ, ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿರುವುದು ಕನ್ನಡದ ಉಳಿವಿನ ದೃಷ್ಟಿಯಿಂದ ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ. ಸರ್ಕಾರದ ಈ ಕ್ರಮವು ವಿದ್ಯಾರ್ಥಿಗಳ ಗ್ರಹಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿದ್ದು, ಇದು ಮಾದರಿ ನಡೆಯಾಗಿದೆ. ಈ ಸದಾಶಯವು ಸಾಕಾರಗೊಳ್ಳಬೇಕಾದಲ್ಲಿ ವಿಶ್ವವಿದ್ಯಾಲಯವು ಉಪನ್ಯಾಸಕರಿಗೆ ಗುಣಮಟ್ಟದ ತರಬೇತಿಯನ್ನು ನೀಡಿ, ಕನ್ನಡದಲ್ಲಿ ಬೋಧಿಸುವಂತೆ ಪ್ರೋತ್ಸಾಹಿಸಬೇಕು’ ಎಂದು ಹೇಳಿದ್ದಾರೆ.
‘ಕನ್ನಡದಲ್ಲಿ ಪದವಿ ಪಡೆಯಲು ಮುಂದೆ ಬರುವ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕಿದೆ. ಗುಣಮಟ್ಟದ ತಾಂತ್ರಿಕ ಶಿಕ್ಷಣ ಕನ್ನಡದ ಮೂಲಕವೂ ಲಭ್ಯ ಎನ್ನುವ ಮನಃಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಕನ್ನಡದಲ್ಲಿ ಕಲಿಯುವ ಬಗೆಗಿನ ಕೀಳರಿಮೆಯನ್ನು ತೊಡೆದು ಹಾಕುವಲ್ಲಿ ಸರ್ಕಾರ ವಿಶೇಷ ಪ್ರಯತ್ನ ನಡೆಸಬೇಕಾಗಿದೆ’ ಎಂದಿದ್ದಾರೆ.
‘ಕನ್ನಡದಲ್ಲಿಯೂ ಬೋಧಿಸುವ ಉಪನ್ಯಾಸಕರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕ್ರಮಕ್ಕೆ ಸರ್ಕಾರ ಮುಂದಾದರೆ ಕನ್ನಡದ ಹಿತದೃಷ್ಟಿಯಿಂದ ಹೊಸ ಶಕೆ ಆರಂಭವಾಗಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.