ADVERTISEMENT

ಎಂಇಎಸ್‌ ನಡೆಗೆ ಕನ್ನಡ ಸಂಘಟನೆಗಳ ಖಂಡನೆ

ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 20:00 IST
Last Updated 31 ಅಕ್ಟೋಬರ್ 2020, 20:00 IST

ಬೆಂಗಳೂರು: ಕನ್ನಡ ರಾಜ್ಯೋತ್ಸವ ದಿನದಂದೇ (ನ.1) ಕರಾಳ ದಿನಾಚರಣೆ ಆಚರಿಸಲು ಮುಂದಾಗಿರುವ ಮಹಾ ರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ನಡೆಯನ್ನು ಕನ್ನಡ ಸಂಘಟನೆಗಳು ಖಂಡಿಸಿದ್ದು, ರಾಜ್ಯದಲ್ಲಿ ಎಂಇಎಸ್ ನಿಷೇಧಿಸಲು ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ವ.ಚ. ಚನ್ನೇಗೌಡ, ‘ಕರಾಳ ದಿನವನ್ನು ಆಚರಿಸುವ ಎಂಇಎಸ್ ಅನ್ನು ಬೆಂಬಲಿಸುವ ಮೂಲಕ ಮಹಾರಾಷ್ಟ್ರ ಸರ್ಕಾರವು ನೀಚತನವನ್ನು ಪ್ರದರ್ಶಿಸುತ್ತಿದೆ. ಅಲ್ಲಿನ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಕಠಿಣ ಎಚ್ಚರಿಕೆ ಯನ್ನು ನೀಡಬೇಕು. ಇಲ್ಲವಾದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ಅಪಾಯವಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಿಟ್ಟ ನಿರ್ಧಾರವನ್ನು ಕೈಗೊಂಡು, ಎಂಇಎಸ್ ಅನ್ನು ರಾಜ್ಯ ದಲ್ಲಿ ನಿಷೇಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ‘ರಾಜ್ಯೋತ್ಸವದ ದಿನದಂದು ಎಂಇಎಸ್ ಆಚರಿಸುತ್ತಿರುವ ಕರಾಳ ದಿನವು ಇತ್ತೀ ಚಿನ ವರ್ಷಗಳಲ್ಲಿ ಮರಾಠಿಗರ ಬೆಂಬಲ ಕಳೆದುಕೊಂಡಿದೆ. ಆದರೂ ರಾಜಕೀಯ ಕಾರಣಗಳಿಗೆ ಇಂತಹ ಕುಚೇಷ್ಟೆಯನ್ನು ಬಿಟ್ಟಿಲ್ಲ. ಭಾಷಾವಾರು ರಾಜ್ಯದ ಸಾರ್ವಭೌಮತೆಗೆ ಧಕ್ಕೆ ತರುವ ಮಹಾರಾಷ್ಟ್ರ ಸರ್ಕಾರದ ನಿಲುವು ಖಂಡನೀಯ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮಹಾರಾಷ್ಟ್ರ ಸರ್ಕಾರದ ನಿಲುವು ಸಂವಿಧಾನ ಒಪ್ಪಿರುವ ಭಾಷಾವಾರು ರಾಜ್ಯಗಳಿಗೆ ಅಪಮಾನ ಮಾಡುವುದೇ ಆಗಿದೆ. ಸಂವಿಧಾನಕ್ಕೆ ಅಪಚಾರ ಮಾಡಲು ಹೊರಟಿರುವ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಬಿ.ಎಸ್. ಯಡಿಯೂರಪ್ಪ ಅವರು ರಾಷ್ಟ್ರಪತಿಗೆ ದೂರು ನೀಡಿ, ಕರಾಳ ದಿನ ಆಚರಿಸದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಲು ಮನವಿ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲ ಪಕ್ಷಗಳ ಮುಖಂಡರೂ ಪ್ರತಿಭಟಿಸಿ, ಅಲ್ಲಿನ ಸರ್ಕಾರವು ಎಂಇಎಸ್‌ಗೆ ನೀಡಿದ ಬೆಂಬಲವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.