ADVERTISEMENT

ಸುವರ್ಣ ಆರೋಗ್ಯ: ಖರ್ಚಾಗದ ಹಣ

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 5:41 IST
Last Updated 20 ಮಾರ್ಚ್ 2020, 5:41 IST
   

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ದಯನೀಯವಾಗಿದ್ದರೂ ಸುವರ್ಣ ಆರೋಗ್ಯ ಟ್ರಸ್ಟ್‌ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಂಚಿಕೆಯಾಗಿದ್ದ ಅನುದಾನ ಖರ್ಚೇ ಆಗಿಲ್ಲ ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಹೇಳಿದೆ.

ವಿಧಾನಸಭೆಯಲ್ಲಿ ಗುರುವಾರ ಮಂಡನೆಯಾದ ಸಮಿತಿಯ 15ನೇ ವರದಿಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಸುವರ್ಣ ಆರೋಗ್ಯ ಟ್ರಸ್ಟ್‌ ಯೋಜನೆಯಡಿ 2016–17ರಲ್ಲಿ ₹11,796 ಕೋಟಿ, 2017–18ರಲ್ಲಿ ₹8,750 ಕೋಟಿ ಹಾಗೂ 2018–19ರಲ್ಲಿ ₹6,552 ಕೋಟಿ ಅನುದಾನ ಉಳಿದಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2016–17ರಲ್ಲಿ ₹865 ಕೋಟಿ, 17–18ರಲ್ಲಿ ₹831 ಕೋಟಿ ಹಾಗೂ 18–19ರಲ್ಲಿ ₹902 ಕೋಟಿ ಖರ್ಚಾಗಿಲ್ಲ. ಈ ಹಣ ಕೇಂದ್ರಕ್ಕೆ ವಾಪಸ್‌ ಹೋಗಿದೆಯೇ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖ ಇಲ್ಲ.

ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಮತ್ತು ಉತ್ತರ ಕರ್ನಾಟಕದ ಆಸ್ಪತ್ರೆಗಳ ಪರಿಸ್ಥಿತಿ ದಯನೀಯವಾಗಿದ್ದು, ವೈದ್ಯರನ್ನು ತುರ್ತಾಗಿ ನೇಮಿಸಬೇಕು. ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬರುವ ವೈದ್ಯರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ADVERTISEMENT

ನಗರ ಹಾಗೂ ಗ್ರಾಮಾಂತರಪ್ರದೇಶಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧಿ ಅಂಗಡಿಗಳಲ್ಲಿ ಔಷಧಿ ನೀಡಲಾಗುತ್ತಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈ ಅಂಗಡಿಗಳಲ್ಲಿ ಮುಗ್ಧ ಜನರಿಗೆ ಅವಧಿ ಮೀರಿದ ಔಷಧಿಗಳನ್ನು ಕೊಡಲಾಗುತ್ತಿದೆ. ಹಲವಾರು ಡ್ರಗ್ಸ್‌ ಕಂಪನಿಗಳು ಇಂತಹ ಅಂಗಡಿಗಳ ಮಾಲೀಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತವೆ. ಗ್ರಾಮಾಂತರ ಪ್ರದೇಶದಲ್ಲಿ ಬಿಲ್‌ ನೀಡುವ ಉದಾಹರಣೆ ಇಲ್ಲ. ನಗರ ಪ್ರದೇಶದ ಒಂದೊಂದು ರಸ್ತೆಯಲ್ಲಿ 10 ಔಷಧಿ ಅಂಗಡಿಗಳಿವೆ. ಇವುಗಳ ನಿಯಂತ್ರಣಕ್ಕೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಸಮಿತಿ ಪ್ರಶ್ನಿಸಿತು.

2018–19ನೇ ಸಾಲಿನಲ್ಲಿ 24,875 ಅಂಗಡಿಗಳ ಪರಿಶೀಲಿಸಿ 1,184 ಅಂಗಡಿಗಳ ಪರವಾನಗಿ ಅಮಾನತು ಹಾಗೂ 786 ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿದ್ದಾರೆ.

‘ಹಾಸ್ಟೆಲ್‌ ಸೌಲಭ್ಯ ಇಲ್ಲ’
ಹಿಂದುಳಿದ ವರ್ಗಗಳ 8–10 ಲಕ್ಷ ಅಭ್ಯರ್ಥಿಗಳು ‍ಪ್ರತಿವರ್ಷ ವಸತಿನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, 2 ಲಕ್ಷ ಮಂದಿಗೆ ಮಾತ್ರ ಪ್ರವೇಶ ಸಿಗುತ್ತಿದೆ. ಇದರಿಂದ ಶೇ 75ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಿಂದ ವಂಚಿತರಾಗುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 51 ವಿದ್ಯಾರ್ಥಿ ನಿಲಯಗಳಿದ್ದು, 35ಕ್ಕೆ ಸ್ವಂತ ಕಟ್ಟಡಗಳಿಲ್ಲ. ಬಿಬಿಎಂಪಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅನುದಾನ ಬಳಸಿ ಮೂರು–4 ಮಹಡಿಗಳ ವಿದ್ಯಾರ್ಥಿ ನಿಲಯ
ಗಳನ್ನು ನಿರ್ಮಾಣ ಮಾಡಬೇಕು ಎಂದು ಸಮಿತಿ ಸೂಚಿಸಿದೆ.

ಜನಗಣತಿಯೇ ಇಲ್ಲದೆ ಇಲಾಖೆಯಿಂದ ಯೋಜನೆಗಳನ್ನು ರೂಪಿಸುವುದು ಕಷ್ಟ. ಹೀಗಾಗಿ, ಕೂಡಲೇ ರಾಜ್ಯದಾದ್ಯಂತ ಜನಗಣತಿ ನಡೆಸಿ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.