ADVERTISEMENT

ಮನೆ ಬಾಗಿಲಿಗೇ 53 ಸೇವೆ: ಸಿಎಂ ಯಡಿಯೂರಪ್ಪ ಚಾಲನೆ

ಜನಸ್ನೇಹಿ, ಜನ ಸೇವಕ, ಮಾಹಿತಿ ಕಣಜಕ್ಕೆ ಮುಖ್ಯಮಂತ್ರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 19:17 IST
Last Updated 4 ಫೆಬ್ರುವರಿ 2020, 19:17 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ‘ಜನಸ್ನೇಹಿ’ ಸಹಾಯ ವೇದಿಕೆ ಸೇರಿದಂತೆ ಐದು ಕಾರ್ಯಕ್ರಮಗಳಿಗೆ ಮಂಗಳವಾರ ಚಾಲನೆ ನೀಡಿದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಎಸ್‌.ಸುರೇಶ್‌ ಕುಮಾರ್‌ ಮತ್ತು ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಇದ್ದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ‘ಜನಸ್ನೇಹಿ’ ಸಹಾಯ ವೇದಿಕೆ ಸೇರಿದಂತೆ ಐದು ಕಾರ್ಯಕ್ರಮಗಳಿಗೆ ಮಂಗಳವಾರ ಚಾಲನೆ ನೀಡಿದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಎಸ್‌.ಸುರೇಶ್‌ ಕುಮಾರ್‌ ಮತ್ತು ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಇದ್ದರು.   

ಬೆಂಗಳೂರು: ಜನಸೇವಕ, ಮಾಹಿತಿ ಕಣಜ, ಆರ್‌ಟಿಐ ಆನ್‌ಲೈನ್‌ ಜಾಲತಾಣ, ಜನ ಸ್ನೇಹಿ ಸಹಾಯ ವೇದಿಕೆ, ಕಾರ್ಮಿಕ ಇಲಾಖೆಯ ಸಹಾಯವಾಣಿ, ಆಶಾದೀಪ ಜಾಲತಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿ, ‘ಜನಸ್ನೇಹಿ ಆಡಳಿತಕ್ಕೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸೇವೆಗಳು ಅತ್ಯಂತ ಸುಲಭವಾಗಿ ಸಿಗಲಿವೆ’ ಎಂದರು.

ಕಾರ್ಮಿಕ ಸಚಿವ ಎಸ್‌.ಸುರೇಶ್‌ ಕುಮಾರ್ ಮಾತನಾಡಿ, ‘ಜನ ಸೇವಕ’ ಸಕಾಲದಡಿಯ ಯೋಜನೆಯಾಗಿದೆ. ಈ ಹಿಂದೆ ಪ್ರಾಯೋಗಿಕವಾಗಿ ದಾಸರಹಳ್ಳಿಯಲ್ಲಿ ಜಾರಿ ಮಾಡಲಾಗಿತ್ತು. ಅದು ಯಶಸ್ವಿಯಾಗಿದ್ದರಿಂದ ಯೋಜನೆಯನ್ನು ರಾಜಾಜಿನಗರ, ಮಹದೇವಪುರ ಮತ್ತು ಬೊಮ್ಮನಹಳ್ಳಿಗೂ ವಿಸ್ತರಿಸಲಾಗುತ್ತಿದೆ’ ಎಂದರು.

ADVERTISEMENT

ಬೆಂಗಳೂರಿನ ಇತರ ಬಡಾವಣೆಗಳಲ್ಲದೇ, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ನಗರಗಳಲ್ಲೂ ಮುಂದಿನ ದಿನಗಳಲ್ಲಿ ಜಾರಿ ಮಾಡಲಾಗುವುದು ಎಂದು ಹೇಳಿದರು.

ನಾಗರಿಕರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸಲು ‘ಮಾಹಿತಿ ಕಣಜ’ ಜಾಲತಾಣ ಆರಂಭಿಸಲಾಗಿದೆ. ಇದರಲ್ಲಿ 11 ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ 80 ಕ್ಕೂ ಹೆಚ್ಚಿನ ಸಂಸ್ಥೆಗಳ ಮಾಹಿತಿ ಈ ಜಾಲತಾಣದಲ್ಲಿ ಸಿಗುತ್ತದೆ. ಇಂತಹದ್ದೊಂದು ಜಾಲತಾಣ ದೇಶದಲ್ಲೇ ಪ್ರಥಮ ಎಂದು ಸುರೇಶ್‌ ಕುಮಾರ್ ವಿವರಿಸಿದರು.

ಸುಪ್ರೀಂಕೋರ್ಟ್‌ನ ತೀರ್ಪಿನಂತೆ ರಾಜ್ಯದಲ್ಲಿ ಆರ್‌ಟಿಐ ಆನ್‌ಲೈನ್‌ ಜಾಲತಾಣ ಆರಂಭಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಯಾವುದೇ ಮಾಹಿತಿ ಪಡೆಯಲು ಅಪೇಕ್ಷಿಸುವ ಅರ್ಜಿದಾರರು ಈ ವೆಬ್‌ ಪೋರ್ಟಲ್‌ ಮೂಲಕ ಕರ್ನಾಟಕ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಪ್ರಾಧಿಕಾರಗಳಿಗೆ ಕೋರಿಕೆ ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಈ ವೆಬ್‌ ಪೋರ್ಟಲ್‌ ಮೂಲಕ ಸಲ್ಲಿಸಿದ ಅರ್ಜಿಯು ಸಚಿವಾಲಯ, ಇಲಾಖೆ, ಸಾರ್ವಜನಿಕ ಪ್ರಾಧಿಕಾರ ಇತರೆ ನೋಡಲ್‌ ಅಧಿಕಾರಿಗೆ ವಿದ್ಯುನ್ಮಾನ ರೂಪದಲ್ಲಿ ತಲುಪುತ್ತದೆ. ಅವರು ಮಾಹಿತಿ ಕೋರಿಕೆ ಅರ್ಜಿಯನ್ನು ವಿದ್ಯುನ್ಮಾನ ರೂಪದಲ್ಲಿ ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ವರ್ಗಾಯಿಸುತ್ತಾರೆ. ಎಸ್‌ಎಂಎಸ್‌ ಮೂಲಕ ಅರ್ಜಿಯ ಹಂತವನ್ನು ಮತ್ತು ಇ–ಮೇಲ್‌ ಮೂಲಕ ಇತರೆ ವಿವರ ಒದಗಿಸಲಾಗುವುದು ಎಂದರು.

ಸೇವೆಗೆ ₹115 ಮಾತ್ರ: ‘ಜನಸೇವಕ’ ಯೋಜನೆಯಡಿ ಕೇವಲ₹115 ನೀಡಿದರೆ ಸಾಕು. ನಾಗರಿಕರು ಓಡಾಡಬೇಕಿಲ್ಲ, ಸಮಯವೂ ಉಳಿಯುತ್ತದೆ. ಕೇಳಿದ ಮಾಹಿತಿ ಅಥವಾ ಪ್ರಮಾಣಪತ್ರ ಮನೆ ಬಾಗಿಲಿಗೇ ತಲುಪಿಸಲಾಗುತ್ತದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

24 ಗಂಟೆಯೂ ದೂರು ನೀಡಬಹುದು

ಜನಸ್ನೇಹಿ ಯೋಜನೆಯಡಿ ಟ್ವಿಟರ್‌ ಮತ್ತು ಸಹಾಯವಾಣಿ ಮೂಲಕ 24 ಗಂಟೆಗಳೂ ದೂರು ನೀಡಬಹುದಾಗಿದೆ. ಇದರ ನಿರ್ವಹಣೆಗೆ ವಾರ್ತಾ ಇಲಾಖೆ ಪರಿಣಿತರ ತಂಡವನ್ನು ರಚಿಸಿದೆ.

ಸಾರ್ವಜನಿಕರ ದೂರನ್ನು ಸ್ವೀಕರಿಸುವ ತಂಡವು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸುತ್ತದೆ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ವಾರ್ತಾ ಇಲಾಖೆ ಕಾರ್ಯ ನಿರ್ವಹಿಸುತ್ತದೆ.

ಸಾರ್ವಜನಿಕ ಹಿತಾಸಕ್ತಿಯ ಕುಂದುಕೊರತೆಗೆ ಮೊಬೈಲ್‌ ದೂರವಾಣಿ ಸಂಖ್ಯೆ 9980299802 ಗೆ ವಾಟ್ಸ್ ಆ್ಯಪ್‌ ಮೂಲಕವೂ ಅಹವಾಲು ಸಲ್ಲಿಸಬಹುದು.

ಇಲಾಖೆಯ ಟ್ವಿಟರ್‌ ಖಾತೆ @karnataka_dipr ಮೂಲಕ ಟ್ವೀಟ್‌ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.