ಬೆಂಗಳೂರು: ಅಲ್ಲಿ ಸೇರಿದ್ದ ಮಕ್ಕಳು ಕಥೆಗಳನ್ನು ಕೇಳಿದರು, ತಮ್ಮದೇ ಕಲ್ಪನೆಯಲ್ಲಿ ಕಥೆಗಳನ್ನು ಕಟ್ಟಿದರು. ಹಿರಿಯರ ಹಿತಮಾತುಗಳಿಗೆ ಕಿವಿಯಾದರು. ಮಕ್ಕಳ–ಸಾಹಿತ್ಯದ ತೋಟದಲ್ಲಿ ದುಂಬಿಗಳಾಗಿ ಸಾಹಿತ್ಯ ಸಾರದ ಮಕರಂದ ಹೀರಿದರು.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಆಡುಗೋಡಿಯ ಪಟೇಲ್ ಮುನಿಚಿನ್ನಪ್ಪ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ‘ಕಥಾವನ’ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಮಕ್ಕಳು ಹಾಗೂ ಶಿಕ್ಷಕರು ಸಾಹಿತ್ಯದ ಸವಿ ಸವಿದರು.
ಮಕ್ಕಳ ಸಾಹಿತ್ಯದ ಮಹತ್ವ ಕುರಿತು ಕಥೆಗಾರರು, ಪ್ರಕಾಶಕರು, ಶಿಕ್ಷಣ ತಜ್ಞರು ಚರ್ಚೆಗಳಲ್ಲಿ ತೊಡಗಿದ್ದರೆ, ವಿದ್ಯಾರ್ಥಿಗಳು ತಮಗಾಗಿ ಆಯೋಜಿಸಿದ್ದ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತ, ಕಥೆಗಳನ್ನು ಬರೆಯುವ ಬಗ್ಗೆ ತಿಳಿದುಕೊಂಡರು. ಈ ಬಾರಿಯ ‘ಕಥಾವನ’ದ ಧ್ಯೇಯವೇ ‘ಮಕ್ಕಳ ಬರವಣಿಗೆಯಲ್ಲಿ ಸುಧಾರಣೆ’ ಎಂದಾಗಿತ್ತು.
ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ್ದ ‘ವನ’ದಲ್ಲಿದ್ದ ಮಕ್ಕಳು ಸಂವಾದದಲ್ಲೂ ಭಾಗಿಯಾದರು. ಅಲ್ಲಿದ್ದ ಪುಸ್ತಕದ ಮಳಿಗೆಗಳಿಗೆ ಭೇಟಿ ನೀಡಿದರು. ಬಂದಿದ್ದ ಲೇಖಕರೊಂದಿಗೆ ಮಾತುಕತೆ ನಡೆಸಿದರು. ತಮ್ಮಲ್ಲಿದ್ದ ಮುಗ್ಧ ಪ್ರಶ್ನೆಗಳಿಗೆ ಉತ್ತರ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.