ಕೆಂಗೇರಿ: ‘ಅವಿಭಕ್ತ ಕುಟುಂಬಗಳಲ್ಲಿ ಇರುತ್ತಿದ್ದ ಹಿರಿಯರ ಜೀವನ ಅನುಭವದ ರಸಪಾಕ ಇಂದು ಕಿರಿಯರಿಗೆ ಸಿಗುತ್ತಿಲ್ಲ. ಮಕ್ಕಳು ಜೀವನಪಾಠದಿಂದ ವಂಚಿತರಾಗುತ್ತಿದ್ದಾರೆ’ ಎಂದು ಆರೂಢ ಭಾರತೀ ಸ್ವಾಮೀಜಿ ಹೇಳಿದರು.
ರಾಮೋಹಳ್ಳಿಯ ಸಿದ್ದಾರೂಢ ಅಂತರರಾಷ್ಟ್ರೀಯ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಆಯೋಜಿಸಿದ್ದ ‘20 ದಿನಗಳ ವಿಕಾಸ ಸಂಗಮ ಬೇಸಿಗೆ ಶಿಬಿರ’ದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ವಿಭಕ್ತ ಕುಟುಂಬಗಳಿಂದಾಗಿ ಕಿರಿಯರಿಗೆ ದೇಶದ ಸಂಸ್ಕೃತಿ, ಆಚಾರ–ವಿಚಾರಗಳ ಬಗ್ಗೆ ಅರಿವು ಮೂಡುತ್ತಿಲ್ಲ. ಅವರಲ್ಲಿ ಸಹನೆ, ಸಹಬಾಳ್ವೆಯನ್ನು ಬಾಲ್ಯದಿಂದಲೇ ಜಾಗೃತಗೊಳಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶಿಬಿರ ಆಯೋಜಿಸಲಾಗಿದೆ. ಶಿಬಿರದ ಉದ್ದೇಶ ಸಂಸ್ಕಾರ ದಾನವೇ ಹೊರತು ಶಿಕ್ಷಣವಲ್ಲ’ ಎಂದು ತಿಳಿಸಿದರು.
‘ಸಿದ್ದಾರೂಢರು ಅಧ್ಯಾತ್ಮ ಪುರುಷರು. ವಿನಾಕಾರಣ ಶಿಕ್ಷಿಸಿದ ವಿರೋಧಿಗಳನ್ನೂ ಪ್ರೀತಿಸುವ ಮೂಲಕ ಸಾಮರಸ್ಯ ಮೆರೆದರು. ಆ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್ ಹೇಳಿದರು.
‘ಹೊಂದಾಣಿಕೆ, ಸಂಯಮ, ವಿವೇಕವನ್ನು ಈ ಹಿಂದೆ ಮನೆಯ ಹಿರಿಯರೇ ಕಲಿಸುತ್ತಿದ್ದರು. ಶಿಬಿರದ ಅವಶ್ಯಕತೆಯೇ ಇರುತ್ತಿರಲಿಲ್ಲ. ಆಚಾರ–ವಿಚಾರಗಳ ಬಗ್ಗೆ, ಜನಪದರ ಬಗ್ಗೆ ಹಿರಿಯರೇ ಮಕ್ಕಳಿಗೆ ತಿಳಿ ಹೇಳುತ್ತಿದ್ದರು’ ಎಂದು ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.