ADVERTISEMENT

ಕೆಂಗೇರಿ | ಪೂರ್ಣಗೊಳ್ಳದ ಸ್ಕೈವಾಕ್: ಮುಖ್ಯರಸ್ತೆಯಲ್ಲೇ ಸಂಚಾರ

ಬಿಬಿಎಂಪಿ ನಿರ್ಲಕ್ಷ್ಯ: ಅಪಾಯಕ್ಕೆ ಆಹ್ವಾನ: ನಾಗರಿಕರ ಆತಂಕ

​ಪ್ರಜಾವಾಣಿ ವಾರ್ತೆ
Published 17 ಮೇ 2023, 16:01 IST
Last Updated 17 ಮೇ 2023, 16:01 IST
ಕೆಂಗೇರಿಯ ಟಿಟಿಎಂಸಿ ಬಸ್ ನಿಲ್ದಾಣದ ಬಳಿಯ ಮುಖ್ಯ ರಸ್ತೆಯಲ್ಲಿ ವಿದ್ಯಾರ್ಥಿಗಳು ದಾಟುತ್ತಿರುವುದು. – ಪ್ರಜಾವಾಣಿ ಚಿತ್ರ
ಕೆಂಗೇರಿಯ ಟಿಟಿಎಂಸಿ ಬಸ್ ನಿಲ್ದಾಣದ ಬಳಿಯ ಮುಖ್ಯ ರಸ್ತೆಯಲ್ಲಿ ವಿದ್ಯಾರ್ಥಿಗಳು ದಾಟುತ್ತಿರುವುದು. – ಪ್ರಜಾವಾಣಿ ಚಿತ್ರ   

ಕೆಂಗೇರಿ: ಇಲ್ಲಿನ ಟಿಟಿಎಂಸಿ ಬಸ್ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಸ್ಕೈ ವಾಕ್ ಕಾಮಗಾರಿ ವಿಳಂಬದಿಂದ ಪಾದಚಾರಿಗಳು ಪ್ರತಿನಿತ್ಯ ಆತಂಕದಲ್ಲೇ ರಸ್ತೆ ದಾಟುವಂತಾಗಿದೆ.

ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಕೆಂಗೇರಿ ಟಿಟಿಎಂಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ಪ್ರದೇಶವು ಬಹುತೇಕ ಜನ ಜಂಗುಳಿಯಿಂದ ಕೂಡಿದೆ.

ಮೆಟ್ರೊ ಸ್ಟೇಷನ್ ಕೂಡ ಇಲ್ಲಿಯೇ ಇದೆ. ರಾತ್ರಿ 10ರವರೆಗೂ ಜನರ ಓಡಾಟ ನಿರಂತರವಾಗಿರುತ್ತದೆ. ಸಾವಿರಾರು ಜನರು ರಸ್ತೆಯ ಒಂದು ಬದಿಯಿಂದ ಮತ್ತೊಂದು ಕಡೆಗೆ ಸಾಗುವುದು ಸಾಮಾನ್ಯವಾಗಿದೆ.

ADVERTISEMENT

ಎರಡು ವರ್ಷಗಳ ಹಿಂದೆ ಪಾದಚಾರಿಗಳ ಸುರಕ್ಷತೆಗಾಗಿ ಬಿಬಿಎಂಪಿಯ ಟ್ರಾಫಿಕ್ ಎಂಜಿನಿಯರಿಂಗ್ ವಿಭಾಗದ(ಟಿಇಸಿ) ವತಿಯಿಂದ ಸ್ಕೈವಾಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಇದುವರೆಗೂ ಸ್ಕೈವಾಕ್ ಕಾಮಗಾರಿ ಪೂರ್ಣಗೊಂಡಿಲ್ಲ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದರಂತೆ ಬೆಂಗಳೂರು ಮೈಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗುತ್ತಿದೆ. ಈ ಒತ್ತಡದ ನಡುವೆ ಪಾದಚಾರಿಗಳು ಜೀವ ಕೈ ಹಿಡಿದು ರಸ್ತೆ ದಾಟುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಲಿಫ್ಟ್ ಕಾಮಗಾರಿ ಅಪೂರ್ಣ: ಮೈಸೂರಿನಿಂದ ಬೆಂಗಳೂರು ಕಡೆಗೆ ಸಾಗುವ ದಿಕ್ಕಿನಲ್ಲಿ ನಿರ್ಮಿಸುತ್ತಿರುವ ಸ್ಕೈವಾಕ್ ಅಪೂರ್ಣವಾಗಿದ್ದರೂ ಬಳಸಬಹುದಾಗಿದೆ. ಮೆಟ್ಟಿಲುಗಳ ಮೂಲಕ ರಸ್ತೆ ದಾಟಲು ಅನುಕೂಲ ಕಲ್ಪಿಸಲಾಗಿದೆ. ಆದರೆ, ಲಿಫ್ಟ್ ಕಾಮಗಾರಿ ಸ್ಥಗಿತಗೊಂಡಿದೆ. ‘ಮೆಟ್ಟಿಲು ಹತ್ತಲು ಸಾಧ್ಯವಾಗದೆ ಮುಖ್ಯರಸ್ತೆ ಮುಖಾಂತರ ರಸ್ತೆ ದಾಟುವಂತಾಗಿದೆ’ ಎಂದು ಹಿರಿಯ ನಾಗರಿಕ ಕಾಂತರಾಜು ಬೇಸರ ವ್ಯಕ್ತಪಡಿಸಿದರು.

ಕೆಂಗೇರಿಯ ಟಿಟಿಎಂಸಿ ಬಸ್ ನಿಲ್ದಾಣದ ಬಳಿಯ ಮುಖ್ಯ ರಸ್ತೆಯಲ್ಲಿ ನಾಗರಿಕರು ದಾಟುತ್ತಿರುವುದು. – ಪ್ರಜಾವಾಣಿ ಚಿತ್ರ

‘ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದರೆ ವೃದ್ಧರು, ಹೆಂಗಸರು ರಸ್ತೆ ದಾಟಲು ಸಹಾಯಕವಾಗಲಿದೆ’ ಎಂದು ವಯೋವೃದ್ಧ ರಾಮಣ್ಣ ಹೇಳಿದರು.
ಇನ್ನು ಬೆಂಗಳೂರಿನಿಂದ ಮೈಸೂರಿನ ಕಡೆ ತೆರಳುವ ಮೆಟ್ರೊ ಸ್ಟೇಷನ್ ಬದಿಯ ಸ್ಕೈವಾಕ್‌ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿಗೆ ಬೇಕಾದ ವಸ್ತುಗಳನ್ನು ರಸ್ತೆ ಬದಿಯಲ್ಲೇ ಹಾಕಲಾಗಿದೆ. ಗುತ್ತಿಗೆದಾರರಿಗೆ ಸಂದಾಯವಾಗಬೇಕಿದ್ದ ಹಣ  ಬಿಬಿಎಂಪಿಯಿಂದ ಇನ್ನೂ ಬಿಡುಗಡೆಯಾಗದಿರುವುದೇ ಕಾಮಗಾರಿ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ಟಿಇಸಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ (ಎಇಇ) ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಪೊಲೀಸ್ ನಿಯೋಜನೆಗೊಂಡರೆ ಒಳಿತು: ಟಿಟಿಎಂಸಿ ಬಸ್ ನಿಲ್ದಾಣ ಬಳಿ, ಮುಖ್ಯರಸ್ತೆ ಮೂಲಕವೇ ರಸ್ತೆ ದಾಟುವುದು ಸಾಮಾನ್ಯವಾಗಿದೆ. ವಾಹನ ಚಾಲಕರಿಗೂ ಇದರಿಂದ ಪ್ರತಿನಿತ್ಯ ಕಿರಿಕಿರಿಯಾಗುತ್ತಿದೆ. ಹಲವು ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಜನರ ಜೀವಕ್ಕೆ ಹಾನಿಯಾಗುವ ಮೊದಲೇ ಸ್ಕೈ ವಾಕ್ ನಿರ್ಮಾಣ ಮಾಡಿದರೆ ಒಳಿತು. ಅಲ್ಲಿಯವರೆಗೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.