ADVERTISEMENT

2,000 ಎಕರೆಯಲ್ಲಿ ಕೆಎಚ್‌ಐಆರ್‌ಸಿ: ಎಂ.ಬಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 15:57 IST
Last Updated 1 ಸೆಪ್ಟೆಂಬರ್ 2023, 15:57 IST
ಎಂ.ಬಿ ಪಾಟೀಲ 
ಎಂ.ಬಿ ಪಾಟೀಲ    

ಬೆಂಗಳೂರು: ನಗರದ ಹೊರ ವಲಯದಲ್ಲಿ 2,000 ಎಕರೆ ವಿಸ್ತೀರ್ಣದಲ್ಲಿ ಜ್ಞಾನ– ಆರೋಗ್ಯ– ಆವಿಷ್ಕಾರ ಮತ್ತು ಸಂಶೋಧನಾ ನಗರ’ (ಕೆಎಚ್‌ಐಆರ್‌ಸಿ) ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ 1,000 ಎಕರೆ ವಿಸ್ತೀರ್ಣದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಅಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಆವಿಷ್ಕಾರ ಮತ್ತು ಸಂಶೋಧನಾ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಎರಡನೇ ಹಂತದಲ್ಲಿ 1,000 ಎಕರೆಯಲ್ಲಿ ಯೋಜನೆಯನ್ನು ವಿಸ್ತರಿಸಲಾಗುವುದು’ ಎಂದರು.

ಬೆಂಳೂರು ಉಪನಗರ ರೈಲು ಯೋಜನೆಯನ್ನೂ ವಿಸ್ತರಿಸುವ ಪ್ರಸ್ತಾವವನ್ನು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ 149 ಕಿ.ಮೀ. ಉದ್ದದಲ್ಲಿ ಯೋಜನೆ ಆರಂಭವಾಗಲಿದೆ. ಎರಡನೇ ಹಂತದಲ್ಲಿ 452 ಕಿ.ಮೀ. ಮಾರ್ಗದಲ್ಲಿ ವಿಸ್ತರಿಸುವಂತೆ ಕೋರಲಾಗಿದೆ. ಮೈಸೂರು, ರಾಮನಗರ, ಮಾಗಡಿ, ತುಮಕೂರು, ಚಿಕ್ಕಬಳ್ಳಾಪುರ, ಗೌರಿಬಿದನೂರುವರೆಗೆ ಉಪನಗರ ರೈಲು ಸಂಚಾರ ಆರಂಭಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. ಎಂಎಸ್‌ಐಎಲ್‌ ಚಿಟ್‌ ಫಂಡ್‌ ವಿಸ್ತರಣೆಗೆ ನಿರ್ಧರಿಸಿದ್ದು, ಕೇರಳ ಸರ್ಕಾರದ ಚಿಟ್‌ ಫಂಡ್‌ ಯೋಜನೆಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರನ್ನು ಎಂಎಸ್‌ಐಎಲ್‌ಗೆ ನೇಮಿಸಿಕೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.