ಬೆಂಗಳೂರು: ಕೋಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಕ್ಕಳನ್ನು ಕಳವು ಮಾಡಿ, ರೈಲು ಮೂಲಕ ಬಿಹಾರಕ್ಕೆ ಕರೆದೊಯ್ಯಲು ಮುಂದಾಗಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಪ್ರಮೀಳಾ ದೇವಿ, ಬಲರಾಮ್ ಬಂಧಿತರು.
‘ಠಾಣಾ ವ್ಯಾಪ್ತಿಯ ಮನೆಯ ಎದುರು ಆಟವಾಡುತ್ತಿದ್ದ ಆರು ವರ್ಷದ ಹೆಣ್ಣು ಮಗು ಹಾಗೂ ಮನೆಯಲ್ಲಿದ್ದ ಎಂಟು ತಿಂಗಳ ಮಗುವನ್ನು ಆರೋಪಿಗಳು, ಕದ್ದು ರೈಲು ಮೂಲಕ ಕರೆದೊಯ್ಯಲು ಮುಂದಾಗಿದ್ದರು. ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತೆರಳಿದಾಗ ಅನುಮಾನಗೊಂಡ ಪ್ರಯಾಣಿಕರೊಬ್ಬರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ರೈಲ್ವೆ ಪೊಲೀಸರು ಇಬ್ಬರು ಮಕ್ಕಳನ್ನು ರಕ್ಷಿಸಿ ಆರೋಪಿಗಳನ್ನು ವಶಕ್ಕೆ
ಪಡೆದುಕೊಂಡಿದ್ದರು. ಇಬ್ಬರನ್ನು ವಿಚಾರಣೆ ನಡೆಸಿದಾಗ ಅವರು ಮಕ್ಕಳ ಕಳ್ಳರು ಎಂಬುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಮಕ್ಕಳನ್ನು ಕಳೆದುಕೊಂಡ ಪೋಷಕರು ಕೊಡಿಗೆಹಳ್ಳಿ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಕೊಡಿಗೆಹಳ್ಳಿ ಪೊಲೀಸರಿಗೆ ಮಕ್ಕಳು ಹಾಗೂ ಆರೋಪಿಗಳನ್ನು ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.