
ಬೆಂಗಳೂರು: ಕೋರಮಂಗಲ ಪೊಲೀಸ್ ಠಾಣೆಯ ರೌಡಿಶೀಟರ್ ಶಬ್ಬೀರ್ ಅಲಿಯಾಸ್ ಸೈಯದ್ ಶಬ್ಬೀರ್ ಅವರ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಹಿಂದೆ 8 ಮಂದಿಯನ್ನು ಬಂಧಿಸಿದ್ದ ಬಂಡೇಪಾಳ್ಯ ಠಾಣೆಯ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.
ಎಲ್ಲ ಆರೋಪಿಗಳ ವಿರುದ್ಧವೂ ‘ಕೋಕಾ’ ಕಾಯ್ದೆ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಅಸ್ತ್ರ ಪ್ರಯೋಗಿಸಲು ಪೊಲೀಸರು ಮುಂದಾಗಿದ್ದಾರೆ.
ಜ.12ರಂದು ಆಟೊದಲ್ಲಿ ತೆರಳುತ್ತಿದ್ದ ಶಬ್ಬೀರ್ ಅವರನ್ನು ಆರೋಪಿಗಳು ಅಡ್ಡಗಟ್ಟಿ ಖಾರದಪುಡಿ ಎರಚಿ ಕೊಲೆ ಮಾಡಿದ್ದರು. ಕೊಲೆ ಪ್ರಕರಣದ ಸಂಬಂಧ ಮಂಗಮ್ಮನಪಾಳ್ಯದ ನೂರ್ (33), ನದೀಂ(34), ಸಲ್ಮಾನ್ ಖಾನ್ ಅಲಿಯಾಸ್ ಸಲ್ಮಾನ್ (27), ಅಲಿ (29), ಸೈಯದ್ ಇಸ್ಮಾಯಿಲ್(30), ಸಿದ್ದಿಕ್ 30), ಖಲೀಂ (32), ಉಮ್ರೇಜ್ (26), ಇಮ್ರಾನ್ (33), ನವಾಜ್ (28), ಸಲ್ಮಾನ್ ಖಾನ್ ಅಲಿಯಾಸ್ ಆಶೀಕ್ (27) ಹಾಗೂ ಸೈಯದ್ ಮುಬಾರಕ್ ಬಂಧಿತರು.
ಸೈಯದ್ ಶಬ್ಬೀರ್ ಅವರಿಗೆ ಅಪರಾಧ ಹಿನ್ನೆಲೆ ಇತ್ತು. ಅವರ ವಿರುದ್ಧ ಕೋರಮಂಗಲ, ಪರಪ್ಪನ ಅಗ್ರಹಾರ, ಕೋಣನಕುಂಟೆ, ಬಂಡೇಪಾಳ್ಯ ಹಾಗೂ ಆಗುಂಬೆ, ಸಾಗರ, ಹಿರೀಸಾವೆ, ಚನ್ನರಾಯಪಟ್ಟಣ ಸೇರಿದಂತೆ ಹಲವು ಠಾಣೆಗಳಲ್ಲಿ 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದವು.
ಶಬ್ಬೀರ್ ಅವರು ಜ.12ರ ರಾತ್ರಿ ಸ್ನೇಹಿತರೊಂದಿಗೆ ಆಟೊದಲ್ಲಿ ಮಂಗಮ್ಮನಪಾಳ್ಯಕ್ಕೆ ತೆರಳುತ್ತಿದ್ದರು. ಆಗ ದುಷ್ಕರ್ಮಿಗಳ ತಂಡವು ಆಟೊ ಅಡ್ಡಗಟ್ಟಿ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು ಎಂದು ಪೊಲೀಸರು ಹೇಳಿದರು.
ಹಫ್ತಾ ವಸೂಲಿ ಮತ್ತು ಮಂಗಳಮ್ಮಪಾಳ್ಯದ ಸುತ್ತಮುತ್ತ ತಮ್ಮ ಪ್ರಾಬಲ್ಯ ಸಾಧಿಸಲು ಹೊಂಚು ಹಾಕಿ ಶಬ್ಬೀರ್ ಅವರನ್ನು ಕೊಲೆ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದರು.
‘ಕೊಲೆಯಾದ ಶಬ್ಬೀರ್ ಅವರು ಗುಜರಿ ಅಂಗಡಿ ಮಾಲೀಕರಿಂದ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಂದ ನಿಯಮಿತವಾಗಿ ಹಫ್ತಾ ವಸೂಲಿ ಮಾಡುತ್ತಿದ್ದರು. ಇದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದರು. ಅಲ್ಲದೇ ಪ್ರಾರ್ಥನಾ ಮಂದಿರದ ಪಕ್ಕದಲ್ಲಿದ್ದ ಆರೋಪಿ ಸನ್ನಿ ಎಂಬಾತನ ಸಹೋದರಿಯ ಜಾಗದ ಮೇಲೆ ಶಬ್ಬೀರ್ ಕಣ್ಣು ಹಾಕಿದ್ದರು. ಆ ಜಾಗವನ್ನು ನನಗೆ ಬಿಟ್ಟುಕೊಡಬೇಕು. ಇಲ್ಲವಾದರೆ ನಾನೇ ಇಲ್ಲಿ ಕಾಂಪೌಂಡ್ ಹಾಕುತ್ತೇನೆ ಎಂದು ಧಮ್ಕಿ ಹಾಕಿದ್ದರು. ಶಬ್ಬೀರ್ ಕಿರುಕುಳ ಮಿತಿಮೀರಿದಾಗ, ನೂರ್ ಅಲಿಯಾಸ್ ಸನ್ನಿ ಮತ್ತು ಅವರ 11 ಮಂದಿ ಸಹಚರರು ಸೇರಿ ಶಬ್ಬೀರ್ ಅವರನ್ನು ಮುಗಿಸಲು ಗ್ಯಾರೇಜ್ನಲ್ಲಿ ಕುಳಿತು ಸಂಚು ರೂಪಿಸಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.