ADVERTISEMENT

ಬೆಂಗಳೂರು: ಗುಂಡಿನ ದಾಳಿಗೆ ’ಸಮೋಸ’ ಕಾರಣ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 16:00 IST
Last Updated 24 ಆಗಸ್ಟ್ 2020, 16:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕೆ.ಆರ್‌. ಪುರ ಠಾಣೆಯ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆಟೊ ಬಾಬು ಎಂಬುವರ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಮೊಹಮ್ಮದ್ ಸುಹೇಲ್ ಪಾಷಾ, ಮಿರ್ಜಾ ಹಾಗೂ ಶೋಹೆಬ್ ಬಂಧಿತರು. ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಗಾಯಗೊಂಡಿದ್ದ ಬಾಬು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದರು.

‘ಬಾಬು ಅವರು ರಿಯಲ್ ಎಸ್ಟೇಟ್ ಕಚೇರಿ ಹೊಂದಿದ್ದರು. ಪಕ್ಕದ ಕಟ್ಟಡದಲ್ಲಿ ಆರೋಪಿ ಮಿರ್ಜಾ ಸಮೋಸ ಅಂಗಡಿ ಇಟ್ಟುಕೊಂಡಿದ್ದ. ಸಮೋಸಾ ತಿನ್ನಲು ಬರುತ್ತಿದ್ದ ಯುವಕರು, ಬಾಬು ಅವರ ಕಚೇರಿ ಬಳಿ ಅಡ್ಡಾದಿಡ್ಡಿಯಾಗಿ ಬೈಕ್‌ಗಳನ್ನು ನಿಲುಗಡೆ ಮಾಡುತ್ತಿದ್ದರು. ಇದೇ ವಿಚಾರವಾಗಿ ಬಾಬು ಹಾಗೂ ಮಿರ್ಜಾ ನಡುವೆ ಜಗಳವಾಗಿತ್ತು. ಠಾಣೆ ಮೆಟ್ಟಿಲೇರಿದ್ದ ಇಬ್ಬರಿಗೂ ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಕೆಲ ದಿನಗಳ ಹಿಂದಷ್ಟೇ ಕಟ್ಟಡದ ಮಾಲೀಕರು, ಸಮೋಸ ಅಂಗಡಿಯನ್ನು ಖಾಲಿ ಮಾಡಿಸಿದ್ದರು. ಅದರಿಂದ ಸಿಟ್ಟಾದ ಮಿರ್ಜಾ, ಇದಕ್ಕೆ ಬಾಬು ಕಾರಣವೆಂದು ತಿಳಿದು ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದ. ಇದೇ 22ರಂದು ರಾತ್ರಿ ಬಾಬು ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಗುಂಡಿನ ದಾಳಿ ನಡೆಸಿದ್ದರು. ಗುಂಡಿನಿಂದ ತಪ್ಪಿಸಿಕೊಂಡಿದ್ದ ಬಾಬು ಮೇಲೆ ಮಾರಕಾಸ್ತ್ರಗಳಿಂದಲೂ ಹಲ್ಲೆ ಮಾಡಿ ಪರಾರಿಯಾಗಿದ್ದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.