ಬೆಂಗಳೂರು: ಪಾಲಿಕೆ 2021–22ನೇ ಸಾಲಿನಲ್ಲಿ ಆಸ್ತಿ ತೆರಿಗೆ ಜೊತೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರವನ್ನು ಸಂಗ್ರಹಿಸಲು ಸಿದ್ಧತೆ ನಡೆಸಿದ್ದು, ಕೂಡಲೇ ಈ ನಿರ್ಧಾರ ಕೈಬಿಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಂಟಿ ಕಾರ್ಯದರ್ಶಿ ರಘುಪತಿ ಭಟ್,‘ಪಾಲಿಕೆ ಈಗಾಗಲೇ ಆಸ್ತಿ ತೆರಿಗೆ ಮೇಲೆ ಶೇ 24ರಷ್ಟು ಉಪಕರ ಸಂಗ್ರಹಿಸುತ್ತಿದೆ. ಆದರೂ ಈಗ ಮತ್ತೆ ಉಪಕರ ಸಂಗ್ರಹಕ್ಕೆ ಮುಂದಾಗಿ, ಸುಲಿಗೆ ಮಾಡಲು ಹೊರಟಿದೆ’ ಎಂದು ದೂರಿದರು.
‘ಕಸ ವಿಲೇವಾರಿಗೆ ಬೆಸ್ಕಾಂ ಮೂಲಕ ಶುಲ್ಕ ಸಂಗ್ರಹಿಸಲು ಹೊರಟಿತ್ತು. ಜನರ ವಿರೋಧದಿಂದ ಅದಕ್ಕೆ ಕಡಿವಾಣ ಬಿತ್ತು. ಪಾಲಿಕೆಗೆ ಎಷ್ಟು ಹಣ ಬಂದರೂ ಸಾಲುತ್ತಿಲ್ಲ. ಇದಕ್ಕಾಗಿ ಜನರ ಮೇಲೆ ತೆರಿಗೆ ಹೊರೆ ಹಾಕುತ್ತಿದೆ. ಇದು ಭ್ರಷ್ಟ ಅಧಿಕಾರಿಗಳ ಮನೆ ಸೇರುತ್ತಿದೆಯೇ ಹೊರತು, ಬೆಂಗಳೂರಿನ ಅಭಿವೃದ್ಧಿಗಲ್ಲ’ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ಆರೋಗ್ಯಸ್ವಾಮಿ ಚಿನ್ನಪ್ಪ,‘ ಪಾಲಿಕೆ ಹಾಗೂ ರಾಜ್ಯ ಸರ್ಕಾರ ಈವರೆಗೆ ಸಾರ್ವಜನಿಕರಿಂದ ಸಂಗ್ರಹಿಸಿರುವ ತೆರಿಗೆ, ಉಪಕರ ಹಾಗೂ ಬಳಕೆಯಾಗಿರುವ ಸಂಪೂರ್ಣ ವಿವರಗಳನ್ನು ಶ್ವೇತಪತ್ರದ ಮೂಲಕ ಮಂಡಿಸಬೇಕು. ಭೂಸಾರಿಗೆ ಸೇರಿದಂತೆ ಯಾವುದೇ ರೀತಿಯ ಉಪಕರ, ಆಸ್ತಿ ತೆರಿಗೆ ಹೆಚ್ಚಿಸಬಾರದು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.