ADVERTISEMENT

ಬ್ರ್ಯಾಂಡ್ ಬೆಂಗಳೂರು | ಮರು ವಿನ್ಯಾಸದೊಂದಿಗೆ ವಿಶ್ವ ದರ್ಜೆಗೇರಲಿದೆ ಕೆಎಸ್‌ಆರ್‌

₹ 1,200 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳಲಿದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ

ಬಾಲಕೃಷ್ಣ ಪಿ.ಎಚ್‌
Published 24 ಡಿಸೆಂಬರ್ 2024, 0:02 IST
Last Updated 24 ಡಿಸೆಂಬರ್ 2024, 0:02 IST
<div class="paragraphs"><p>ನವೀಕರಣಗೊಳ್ಳಲಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ'ದ ವಿಹಂಗಮ ನೋಟ </p></div>

ನವೀಕರಣಗೊಳ್ಳಲಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ'ದ ವಿಹಂಗಮ ನೋಟ

   

ಪ್ರಜಾವಾಣಿ ಚಿತ್ರ: ರಂಜು ಪಿ.

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ಮರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಒಟ್ಟು ₹ 1,200 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ ಕೋರಿ ಕೇಂದ್ರ ಸಂಪುಟದ ಮುಂದೆ ಪ್ರಸ್ತಾವ ಸಲ್ಲಿಸಲಾಗಿದೆ.

ADVERTISEMENT

ಕೆಎಸ್‌ಆರ್‌ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣ, ಸಿಟಿ ರೈಲ್ವೆ ನಿಲ್ದಾಣ ಎಂದು ನಾನಾ ಹೆಸರಿನಿಂದ ಕರೆಯಲಾಗುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವು ನಗರದ ಪ್ರಮುಖ ನಾಲ್ಕು ನಿಲ್ದಾಣಗಳಲ್ಲಿ ಮೊದಲನೇಯದ್ದಾಗಿದೆ.

ಬೈಯಪ್ಪನಹಳ್ಳಿ ಎಸ್‌ಎಂವಿಟಿ ನಿಲ್ದಾಣವು ಈಗಾಗಲೇ ₹ 314 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿದೆ. ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯ ಹೊಂದಿರುವ ದೇಶದ ಮೊದಲ ರೈಲು ನಿಲ್ದಾಣ ಎಂಬ ಹಿರಿಮೆಗೆ ಅದು ಪಾತ್ರವಾಗಿದೆ. ₹ 380 ಕೋಟಿ ವೆಚ್ಚದಲ್ಲಿ  ಯಶವಂತಪುರ ರೈಲು ನಿಲ್ದಾಣ ಮತ್ತು ₹ 480 ಕೋಟಿ ವೆಚ್ಚದಲ್ಲಿ ಕಂಟೋನ್ಮೆಂಟ್‌ ರೈಲು ನಿಲ್ದಾಣಗಳು ಮೇಲ್ದರ್ಜೆಗೇರುತ್ತಿವೆ. ಕೆಎಸ್‌ಆರ್‌ ನಿಲ್ದಾಣವನ್ನೂ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಈಗ ಶುರುವಾಗಿದೆ.

ಕೆಎಸ್‌ಆರ್‌ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಿ ರೈಲ್ವೆ ಮಂಡಳಿಗೆ ಸಲ್ಲಿಸಲಾಗಿತ್ತು. ಮಂಡಳಿಯು ಅನುಮೋದನೆ ನೀಡಿದೆ. ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದ ಬಳಿಕ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪಿಪಿಪಿ ಮಾದರಿ: ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಈ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರವು ನವೀಕರಣ ಕಾಮಗಾರಿ ಕೈಗೊಳ್ಳಲಿದೆ. ಅದಕ್ಕಾಗಿ ₹ 1,200 ಕೋಟಿ ಅಂದಾಜು ವೆಚ್ಚ ಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿ ತಿಳಿಸಲಾಗಿದೆ.

ಯೋಜನೆ ವಿವರ: ಪೂರ್ವ ಟರ್ಮಿನಲ್ 279 ಮೀಟರ್‌ ಉದ್ದ 58 ಮೀಟರ್‌ ಅಗಲ ಹೊಂದಿರಲಿದೆ. ನಿರ್ಮಾಣ ಪ್ರದೇಶ 127,044 ಚದರ ಮೀಟರ್‌ ಇರಲಿದೆ. ಬೇಸ್‌ಮೆಂಟ್‌ 2, ಬೇಸ್‌ಮೆಂಟ್‌ 1, ನೆಲ ಮತ್ತು 9 ಮಹಡಿಗಳು ನಿರ್ಮಾಣಗೊಳ್ಳಲಿವೆ. ಬೇಸ್‌ಮೆಂಟ್‌ನಿಂದ 5ನೇ ಮಹಡಿವರೆಗೆ ರೈಲ್ವೆಯ ಅಧಿಕೃತ ಬಳಕೆಗೆ ಮೀಸಲಾಗಿವೆ. 6ರಿಂದ 9ನೇ ಮಹಡಿಗಳನ್ನು ವಾಣಿಜ್ಯ ಬಳಕೆಗಾಗಿ ಒದಗಿಸಲಾಗುತ್ತದೆ.

ಪೂರ್ವ ಭಾಗದಲ್ಲಿ ಎರಡು ನೆಲಮಹಡಿಗಳು ಪಾರ್ಕಿಂಗ್‌ಗೆ ಬಳಕೆಯಾಗಲಿವೆ. 1,877 ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ. ಕಟ್ಟಡದ ಮುಂಭಾಗದಲ್ಲಿ 75 ಆಟೊಗಳು, 131 ಟ್ಯಾಕ್ಸಿಗಳಿಗೆ ಪಿಕ್-ಅಪ್ ಮತ್ತು ಡ್ರಾಪ್-ಅಪ್‌ ಮಾಡುವಷ್ಟು ವಿಶಾಲವಾದ ಸ್ಥಳ ಇರಲಿದೆ. ಹೆಚ್ಚುವರಿಯಾಗಿ ಮುಂಭಾಗದ ಅಂಗಳದ ಮೇಲ್ಮೈ ಪಾರ್ಕಿಂಗ್‌ ಅನ್ನು 81 ತ್ರಿಚಕ್ರ ವಾಹನಗಳು, 36 ನಾಲ್ಕು ಚಕ್ರ ವಾಹನಗಳು ಮತ್ತು 10 ಬಸ್‌ಗಳಿಗೆ ಮೀಸಲಿಡಲಾಗುತ್ತದೆ.

ಪೂರ್ವ ಟರ್ಮಿನಲ್ ಅನ್ನು ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ನಿಲ್ದಾಣವು  ಸಂಪರ್ಕಿಸಲಿದೆ. ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ 10 ಮೀಟರ್ ಅಗಲದ ಟ್ರಾವೆಲೇಟರ್‌ ಸಂಪರ್ಕ ಇರಲಿದೆ. ಇದಲ್ಲದೆ ಮುಖ್ಯ ನಿಲ್ದಾಣ ಕಟ್ಟಡ ಮತ್ತು ಮೆಟ್ರೊ ನಿಲ್ದಾಣದ ನಡುವೆ 8 ಮೀಟರ್‌ ಅಗಲದ ಸಂಪರ್ಕ ಕಲ್ಪಿಸಲಾಗುತ್ತದೆ.

ಎರಡನೇ ಪ್ರವೇಶ ಭಾಗದಲ್ಲಿ 384 ಕಾರು ನಿಲ್ಲುವ ಸಾಮರ್ಥ್ಯದೊಂದಿಗೆ ಬಹು ಹಂತದ ಕಾರ್ ಪಾರ್ಕಿಂಗ್ (ಎಂಎಲ್‌ಸಿಪಿ) ಸೌಲಭ್ಯವನ್ನು ಯೋಜಿಸಲಾಗಿದೆ.

ಪಶ್ಚಿಮ ಟರ್ಮಿನಲ್ (ಎಂ.ಜಿ. ಕಾಲೊನಿಯ ಕೊನೆಯಲ್ಲಿ) ಕಡೆಯಿಂದ ಮೂರನೇ ಪ್ರವೇಶ ಇರಲಿದೆ. 53 ಮೀಟರ್‌ ಉದ್ದ 18 ಮೀಟರ್‌ ಅಗಲದ ಹೊಸ ಟರ್ಮಿನಲ್‌ ಅನ್ನು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತಾವಿತ ಎರಡು ನೆಲಮಾಳಿಗೆಯ ಹಂತಗಳಲ್ಲಿ 130 ಕಾರುಗಳ ಪಾರ್ಕಿಂಗ್‌ಗೆ ಲಭ್ಯವಾಗಲಿವೆ. 

36 ಮೀಟರ್‌ ಅಗಲ, 181 ಮೀಟರ್‌ ಉದ್ದದ ಏರ್‌ ಕಾನ್‌ಕೋರ್ಸ್‌ ಪ್ಲ್ಯಾಟ್‌ಫಾರ್ಮ್‌ ಮಟ್ಟದಿಂದ 9 ಮೀಟರ್‌ ಎತ್ತರ ಇರಲಿದೆ. 6,516 ಮೀಟರ್‌ ವಿಸ್ತೀರ್ಣದೊಂದಿಗೆ ದಕ್ಷಿಣ ಮತ್ತು ಉತ್ತರ ಭಾಗಗಳನ್ನು ಸಂಪರ್ಕಿಸುವ ಎರಡು ‍ಪಾದಚಾರಿ ಮೇಲ್ಸೇತುವೆಗಳು ಇರಲಿವೆ.

ನವೀಕರಣಗೊಳ್ಳಲಿರುವ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ’ದಲ್ಲಿ ಸೌರ ವಿದ್ಯುತ್‌ ಪ್ಯಾನಲ್‌ಗಳನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು ಪ್ರಜಾವಾಣಿ ಚಿತ್ರ: ರಂಜು ಪಿ.

ಎರಡು ಹೆಚ್ಚುವರಿ ಪ್ಲ್ಯಾಟ್‌ಫಾರ್ಮ್‌

ಕೆಎಸ್‌ಆರ್‌ ನಿಲ್ದಾಣಗಳಲ್ಲಿ ಹತ್ತು ಪ್ಲ್ಯಾಟ್‌ಫಾರ್ಮ್‌ಗಳಿವೆ. ಹೊಸ ಯೋಜನೆಯಡಿ ಮತ್ತೆರಡು ಪ್ಲ್ಯಾಟ್‌ಫಾರ್ಮ್‌ಗಳು ನಿರ್ಮಾಣಗೊಳ್ಳಲಿವೆ. ಎಂ.ಜಿ. ಕಾಲೊನಿ ಕಡೆಯಿಂದ ಪ್ರವೇಶದೊಂದಿಗೆ ಪ್ರತ್ಯೇಕವಾಗಿ ಪ್ಲ್ಯಾಟ್‌ಫಾರ್ಮ್‌ಗಳು ನಿರ್ಮಾಣವಾಗಲಿದ್ದು ಅದಕ್ಕಾಗಿ ₹ 222 ಕೋಟಿ ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.

ಜನರ ಬಯಕೆಯಂತೆ ಹೈಟೆಕ್‌

‘ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಸಿಕ್ಕರೆ ಸಾಕು ನಿಲ್ದಾಣಗಳಲ್ಲಿ ಕೂರಲು ಬೆಂಚ್‌ಗಳಿದ್ದರೆ ಸಾಕು ಎಂಬ ಕಾಲ ಈಗಿಲ್ಲ. ಹೈಟೆಕ್ ಸೌಕರ್ಯಗಳನ್ನು ಜನ ಬಯಸುತ್ತಿದ್ದಾರೆ. ಅದಕ್ಕೆ ಸರಿಯಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ದೇಶದ ಎಲ್ಲ ಪ್ರಮುಖ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಕರ್ನಾಟಕದಲ್ಲಿಯೇ 62 ನಿಲ್ದಾಣಗಳು ಮೇಲ್ದರ್ಜೆಗೇರುತ್ತಿವೆ. ಕೆಲವೆಲ್ಲ ಉದ್ಘಾಟನೆಗೊಂಡಿವೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು. ‘ಕೆಎಸ್‌ಆರ್‌ ನಿಲ್ದಾಣದ ನವೀಕರಣಗೊಂಡಾಗ ದೇಶದ ಎರಡನೇ ಅತಿದೊಡ್ಡ ನಿಲ್ದಾಣವಾಗಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಇರುವಂತೆ ಇಲ್ಲಿಯೂ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ವಿದೇಶಗಳಲ್ಲಿ ರೈಲು ನಿಲ್ದಾಣಗಳು ಹೇಗಿವೆಯೋ ಅದಕ್ಕಿಂತ ಹೈಟೆಕ್‌ ಆಗಲಿದೆ. ಇದರಲ್ಲಿ 12 ಅಡಿ ಉದ್ದದ ಸುರಂಗ ಅಕ್ವೇರಿಯಂ ಮಾಡುವ ಗುರಿಯೂ ಇದೆ. ನಮ್ಮ ಬೇಡಿಕೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ರೈಲ್ವೆ ಅಧಿಕಾರಿಗಳು ಸ್ಪಂದಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.