ಬೆಂಗಳೂರು: ‘ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಇಂದಿನ ಯುವ ಜನಾಂಗ ಓದಬೇಕು. ಅವರು ಸಾಹಿತ್ಯದ ಮೂಲಕ ಸಾರಿದ ಜೀವನ ಮೌಲ್ಯಗಳನ್ನು ಅನುಸರಿಸಬೇಕು’ ಎಂದು ಲೇಖಕ ವೈ. ಬಿ.ಎಚ್. ಜಯದೇವ್ ಹೇಳಿದರು.
ಕುವೆಂಪು ಜನ್ಮದಿನದ ಅಂಗವಾಗಿ ಮಲ್ಲಸಂದ್ರದ ರುದ್ರಭೂಮಿಯಲ್ಲಿ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಸ್ಮಶಾನ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕವಿಗೋಷ್ಠಿ ಉದ್ಘಾಟಿಸಿದ ಲೇಖಕ ಗುರುರಾಜ್ ಎಸ್ .ದಾವಣಗೆರೆ, ‘ಕುವೆಂಪು ಅವರು ಸ್ವಾತಂತ್ರ್ಯ ಪೂರ್ವ ದಲ್ಲೇ ತಮ್ಮ ಕೃತಿಗಳ ಮೂಲಕ ವೈಚಾ ರಿಕ ಪ್ರಜ್ಞೆಯನ್ನು ಬಿತ್ತಿದ್ದರು. ವಿಶ್ವಮಾ ನವ ಸಂದೇಶ ಸಾರಿದ್ದರು’ ಎಂದರು.
ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್, ‘ಕುವೆಂಪು ಅವರ ಕೃತಿಗಳಲ್ಲಿ ಮಾನವೀಯತೆ, ಸಾಮಾಜಿಕ ಕಳಕಳಿ, ಪ್ರೀತಿ, ಕರುಣೆ, ಬಂಡಾಯ, ವೈಚಾರಿಕತೆ ಈ ಎಲ್ಲವನ್ನೂ ಕಾಣಬಹುದು’ಎಂದರು.
ಮಮತಾ ವಾರನಹಳ್ಳಿ, ಡಾ. ರಂಗನಾಥ್, ಕೆ.ಎಂ ರೇವಣ್ಣ, ಶಾಂತಕುಮಾರ್, ಚನ್ನಕೇಶವ ಲಾಳನಕಟ್ಟೆ, ಭಾರತಿ ಕೋಕಲೆ, ಡಾ.ಮಂಜುನಾಥ್, ಚಿತ್ತಣ್ಣ ದ್ವಾರನಕುಂಟೆ ಸೇರಿ 30ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದರು.
ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್, ಕಾದಂಬರಿಕಾರ ಕಂನಾಡಿಗಾ ನಾರಾಯಣ, ಲಕ್ಷ್ಮೀ ಶ್ರೀನಿವಾಸ್ ಉಪಸ್ಥಿತರಿದ್ದರು. ಗಾಯಕ ರಾದ ಕೃಷ್ಣಮೂರ್ತಿ, ಈ. ಬಸವರಾಜ್ ಕುವೆಂಪು ರಚನೆಯ ಗೀತೆಗಳನ್ನು ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.