ADVERTISEMENT

ಕಾರ್ಮಿಕ ಕಾಯ್ದೆಗಳಿಂದ ಇನ್ನಷ್ಟು ವಿನಾಯಿತಿ ಬೇಕು: ಅರಸಪ್ಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:32 IST
Last Updated 18 ಆಗಸ್ಟ್ 2020, 19:32 IST
ಅರಸಪ್ಪ 
ಅರಸಪ್ಪ    

ಬೆಂಗಳೂರು: ‘ಕೊರೊನಾ ಸಂಕಷ್ಟದ ಕಾಲದಲ್ಲಿ ಸಣ್ಣ ಕೈಗಾರಿಕೆಗಳು ಉಳಿಯಬೇಕೆಂದರೆ ಕನಿಷ್ಠ ವೇತನ ಕಾಯ್ದೆ ಸೇರಿ ಕಾರ್ಮಿಕ ಕಾಯ್ದೆಗಳಿಗೆ ಮೂರು ವರ್ಷಗಳ ವಿನಾಯಿತಿ ನೀಡಬೇಕು’ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಆಗ್ರಹಿಸಿದರು.

‘ಕೋವಿಡ್ಪರಿಣಾಮ ಶೇ 20ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ವಹಿವಾಟಿನಲ್ಲಿ ಶೇ 30ರಿಂದ ಶೇ 70ರಷ್ಟು ಕುಸಿತವಾಗಿದೆ. ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳುಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿವೆ. ಆದರೆ, ಅದು ಸಾಲದು’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬೋನಸ್ ಕಾಯ್ದೆ, ಗುತ್ತಿಗೆ ಕಾರ್ಮಿಕರ ಕಾಯ್ದೆ ಮತ್ತು ವಲಸೆ ಕಾರ್ಮಿಕರ ಕಾಯ್ದೆಗಳಿಂದ ವಿನಾಯಿತಿ ನೀಡಬೇಕು. ಪಿಎಫ್ ಮತ್ತು ಇಎಸ್‌ಐ ಮೊತ್ತವನ್ನು ಸರ್ಕಾರವೇ ಪಾವತಿಸಬೇಕು. ಇಲ್ಲದಿದ್ದರೆ ಕೈಗಾರಿಕೆಗಳ ಪುನಶ್ಚೇತನ ಸಾಧ್ಯವಿಲ್ಲ’ ಎಂದರು.

ADVERTISEMENT

‘ಸರ್ಕಾರಿ ಪ್ರಾಧಿಕಾರಗಳು ಅಭಿವೃದ್ಧಿಪಡಿಸಿದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಶೇ 8ರಷ್ಟು ಕೈಗಾರಿಕೆಗಳಿದ್ದರೆ, ಖಾಸಗಿ ವಸಾಹತು ಪ್ರದೇಶದಲ್ಲಿ ಶೇ 92ರಷ್ಟು ಕೈಗಾರಿಕೆಗಳು ಇವೆ. ಇಲ್ಲಿ ವಿದ್ಯುತ್ ಸೇರಿ ಮೂಲಸೌಕರ್ಯ ಸಮರ್ಪಕವಾಗಿ ಇಲ್ಲದ ಕಾರಣ ಕೈಗಾರಿಕೆಗಳ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ವಸಾಹತುಗಳನ್ನು ಸರ್ಕಾರ ಪ್ರಾರಂಭಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಿಂದ ವಿದೇಶಗಳಿಗೆ ರಫ್ತು ವಹಿವಾಟು ಹೆಚ್ಚಿದ್ದರೂ ಬಂದರು ಸಂಪರ್ಕ ಇಲ್ಲ. ಚೆನ್ನೈ ಮೂಲಕ ರಫ್ತಾಗಬೇಕಿದೆ. ಬೆಂಗಳೂರಿನಿಂದ ಮಂಗಳೂರಿಗೆ ಉತ್ತಮ ರಸ್ತೆ ನಿರ್ಮಿಸಿದರೆ ರಫ್ತು ವಹಿವಾಟಿಗೆ ಅನುಕೂಲವಾಗಲಿದೆ. ಅದರಿಂದ ಸರ್ಕಾರಕ್ಕೂ ಹೆಚ್ಚಿನ ವರಮಾನ ಬರಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.