ADVERTISEMENT

ಬೈಯಪ್ಪನಹಳ್ಳಿ: ಮಣ್ಣು ಕುಸಿದು ಕಾರ್ಮಿಕ ಸಾವು

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:39 IST
Last Updated 1 ಜೂನ್ 2019, 20:39 IST

ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ತೋಡಿದ್ದ ಗುಂಡಿಯೊಳಗೆ ಕುಸಿದ ಮಣ್ಣಿನಡಿ ಸಿಲುಕಿ ಕಾರ್ಮಿಕಶ್ರೀಕಾಂತ್‌ (25) ಎಂಬುವರು ಮೃತಪಟ್ಟಿದ್ದಾರೆ.

‘ಕೊಪ್ಪಳ ಜಿಲ್ಲೆಯ ಶ್ರೀಕಾಂತ್, ಕೆಲಸ ಹುಡುಕಿಕೊಂಡು ಸಂಬಂಧಿಕರ ಜೊತೆ ನಗರಕ್ಕೆ ಬಂದಿದ್ದರು. ಪಿ.ಜೆ.ಬಿ ಎಂಜಿನಿಯರಿಂಗ್ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು. ಕಂಪನಿಯು ಕಾಮಗಾರಿ ನಡೆಸುತ್ತಿದ್ದ ಸ್ಥಳದಲ್ಲಿ ಗುಂಡಿ ತೆಗೆಯುವ ಹಾಗೂ ಪಾಯ ತೊಡುವ ಕೆಲಸ ಮಾಡುತ್ತಿದ್ದರು’ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಹೇಳಿದರು.

‘ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನೀರು ಸಂಪರ್ಕದ ಪೈಪ್‌ ಅಳವಡಿಸುವುದಕ್ಕಾಗಿ ಗುಂಡಿ ತೋಡಲಾಗುತ್ತಿತ್ತು. ಮೇ 30ರಂದು ಸಂಜೆ ಅದೇ ಗುಂಡಿಯೊಳಗೆ ನಿಂತು ಶ್ರೀಕಾಂತ್, ಕೆಲಸ ಮಾಡುತ್ತಿದ್ದರು. ಏಕಾಏಕಿ ಗುಂಡಿಯೊಳಗೆ ಮಣ್ಣು ಕುಸಿದಿದ್ದರಿಂದ ಅವರು ಅದರಡಿಯಲ್ಲೇ ಸಿಲುಕಿದ್ದರು’ ಎಂದು ಮಾಹಿತಿ ನೀಡಿದರು.

ADVERTISEMENT

’ಜೆಸಿಬಿ ಯಂತ್ರದ ಮೂಲಕ ಮಣ್ಣನ್ನು ತೆಗೆಸಲಾಗಿತ್ತು. ಅಷ್ಟರಲ್ಲೇ ಶ್ರೀಕಾಂತ್‌, ಉಸಿರುಗಟ್ಟಿ ಮೃತಪಟ್ಟಿದ್ದರು. ಶವವನ್ನು ಮೇಲಕ್ಕೆತ್ತಿ ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಯಿತು’ ಎಂದು ತಿಳಿಸಿದರು.

ಶ್ರೀಕಾಂತ್ ಅವರ ಸಂಬಂಧಿ ಯಮನೂರಪ್ಪ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.