ADVERTISEMENT

ಚಿಕ್ಕಬಾಣಾವರ: ಕೆರೆ ಒಡಲನ್ನು ಅವರಿಸಿದ ಕತ್ತೆ ಕಿವಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 19:34 IST
Last Updated 12 ಫೆಬ್ರುವರಿ 2019, 19:34 IST
ಚಿಕ್ಕಬಾಣಾವರ ಕೆರೆ ಒಡಲಲ್ಲಿ ಬೆಳೆದಿರುವ ಕತ್ತೆ ಕಿವಿ
ಚಿಕ್ಕಬಾಣಾವರ ಕೆರೆ ಒಡಲಲ್ಲಿ ಬೆಳೆದಿರುವ ಕತ್ತೆ ಕಿವಿ   

ಹೆಸರಘಟ್ಟ: ಮುಖ್ಯರಸ್ತೆಯಲ್ಲಿರುವ ಚಿಕ್ಕಬಾಣಾವರ ಗ್ರಾಮದ ಕೆರೆ ಒಡಲಲ್ಲಿ ಕತ್ತೆ ಕಿವಿ ಗಿಡ ಬೆಳೆದಿದೆ. ಕೆರೆಯಿಂದ ಹೊರ ಹೊಮ್ಮುತ್ತಿರುವ ಗಬ್ಬುನಾತಕ್ಕೆ ಜನರು ಮೂಗು ಮುಚ್ಚಿಕೊಂಡು ಓಡಾಡುವಂತೆ ಅಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

‘110 ಎಕರೆ ವಿಸ್ತೀರ್ಣ ಇದ್ದ ಕೆರೆಯ ಜಾಗ 90 ಎಕರೆಗೆ ಇಳಿದಿದೆ. ಮೇದರಹಳ್ಳಿ, ಶೆಟ್ಟಿಹಳ್ಳಿ ಗ್ರಾಮಗಳ ಕಲುಷಿತ ನೀರು ಕೆರೆಗೆ ಸೇರುತ್ತಿದೆ. ಮೇದರಹಳ್ಳಿ ಗ್ರಾಮದಲ್ಲಿರುವ ತ್ಯಾಜ್ಯ ನೀರಿನ ಸಂಸ್ಕರಣ ಘಟಕವು ಹಲವು ವರ್ಷಗಳ ಹಿಂದೆ ಸ್ಥಗಿತಗೊಂಡಿದೆ. ಚರಂಡಿ ನೀರನ್ನು ಸಂಸ್ಕರಿಸಿ ಬಿಡುವ ತನಕ ಕೆರೆಯ ಸ್ವರೂಪ ಬದಲಾಗದು’ ಎನ್ನುತ್ತಾರೆ ಗ್ರಾಮಸ್ಥರು.

‘ಕೆರೆಯ ಹತ್ತು ಅಡಿ ದೂರದಲ್ಲಿ ಬೃಹತ್ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿದೆ. ಅದರ ತ್ಯಾಜ್ಯ ನೀರನ್ನು ಕೆರೆಗೆ ನೇರವಾಗಿ ಹರಿದು ಬಿಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕೆರೆಯ ಎರಡು ದಿಕ್ಕಿನಲ್ಲಿಯೂ ಕಲುಷಿತ ನೀರು ಸೇರುತ್ತಿರುವುದರಿಂದ ಕೆರೆಯು ಗಬ್ಬುವಾಸನೆ ಬೀರಲು ಕಾರಣವಾಗಿದೆ’ ಎನ್ನುತ್ತಾರೆ ಗ್ರಾಮದ ನಿವಾಸಿ ಸಂತೋಷ್.

ADVERTISEMENT

ಕೆರೆಯ ಒಂದು ಭಾಗದಲ್ಲಿ ಕೆರೆಗುಡ್ಡದಹಳ್ಳಿ, ಅಬ್ಬಿಗೆರೆ, ಮತ್ತಿಕೆರೆ ಗ್ರಾಮಗಳಿಗೆ ತೆರಳಲು ಬಸ್‌ ನಿಲ್ದಾಣವಿದೆ. ಪ್ರತಿ ದಿನ ಶಾಲಾ, ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಈ ನಿಲ್ದಾಣಕ್ಕೆ ಬರುತ್ತಾರೆ. ‘ದುರ್ವಾಸನೆ ಸಹಿಸಿಕೊಂಡೇ ಬಸ್‌ ಹತ್ತಬೇಕಿದೆ’ ಎಂದು ವಿದ್ಯಾರ್ಥಿಗಳು ಹೇಳಿದರು.

ಬಿ.ಡಿ.ಎ ಅಧಿಕಾರಿಗಳು ಈ ಕೆರೆಯ ಅಭಿವೃದ್ದಿ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.