ADVERTISEMENT

ಕಲಾ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ

ಕಲಾವಿದರು ಪವಾಡ ಪುರುಷರು– ಕವಿ ಸಿದ್ಧಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 21:39 IST
Last Updated 8 ಜನವರಿ 2021, 21:39 IST
ಕರ್ನಾಟಕ ಲಲಿತಕಲಾ ಅಕಾಡೆಮಿಯ 48ನೇ ವಾರ್ಷಿಕ ಕಲಾ ಪ್ರದರ್ಶನ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರಾದ ಬಿ.ಎಂ. ಹೆಗಡೆ (ಉತ್ತರ ಕನ್ನಡ), ಪ್ರಕಾಶ್ ಗಡ್ಕರ್ (ಕಲಬುರ್ಗಿ) ಹಾಗೂ ಬಿ.ಆರ್. ಕೊರ್ತಿ (ದಾವಣಗೆರೆ) ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಡೆಮಿಯ ಅಧ್ಯಕ್ಷ ಮಹೇಂದ್ರ ಡಿ., ಕಲಾವಿದ ಡಾ.ಬಿ.ಕೆ.ಎಸ್. ವರ್ಮ, ಸಿದ್ಧಲಿಂಗಯ್ಯ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಬಸವರಾಜ ಹೂಗಾರ್ ಇದ್ದರು. ಪ್ರಶಸ್ತಿ ತಲಾ ₹50 ಸಾವಿರ ನಗದು ಬಹುಮಾನ ಒಳಗೊಂಡಿದೆ.   –ಪ್ರಜಾವಾಣಿ ಚಿತ್ರ
ಕರ್ನಾಟಕ ಲಲಿತಕಲಾ ಅಕಾಡೆಮಿಯ 48ನೇ ವಾರ್ಷಿಕ ಕಲಾ ಪ್ರದರ್ಶನ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರಾದ ಬಿ.ಎಂ. ಹೆಗಡೆ (ಉತ್ತರ ಕನ್ನಡ), ಪ್ರಕಾಶ್ ಗಡ್ಕರ್ (ಕಲಬುರ್ಗಿ) ಹಾಗೂ ಬಿ.ಆರ್. ಕೊರ್ತಿ (ದಾವಣಗೆರೆ) ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಡೆಮಿಯ ಅಧ್ಯಕ್ಷ ಮಹೇಂದ್ರ ಡಿ., ಕಲಾವಿದ ಡಾ.ಬಿ.ಕೆ.ಎಸ್. ವರ್ಮ, ಸಿದ್ಧಲಿಂಗಯ್ಯ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಬಸವರಾಜ ಹೂಗಾರ್ ಇದ್ದರು. ಪ್ರಶಸ್ತಿ ತಲಾ ₹50 ಸಾವಿರ ನಗದು ಬಹುಮಾನ ಒಳಗೊಂಡಿದೆ.   –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಣ್ಣ ಮತ್ತು ಗೆರೆಗಳಿಂದ ದೈವಿಕತೆಯ ಅದ್ಭುತ ಸೃಷ್ಟಿಸುವ ಕಲಾವಿದರು ಒಂದು ರೀತಿಯಲ್ಲಿ ಪವಾಡ ಪುರುಷರಿದ್ದಂತೆ’ ಎಂದು ಕವಿ ಸಿದ್ಧಲಿಂಗಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ನಗರದಲ್ಲಿ ಶುಕ್ರವಾರ ಆಯೋಜಿಸಿದ ಸಮಾರಂಭದಲ್ಲಿ ಕಲಾ ಸಾಧಕರಿಗೆ 2019ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.

‘ಬಣ್ಣ ಮತ್ತು ಗೆರೆಗಳ ಮೂಲಕ ನವ್ಯಲೋಕ ಸೃಷ್ಟಿಸಲು ಕಲಾವಿದರಿಗೆ ಮಾತ್ರ ಸಾಧ್ಯವಾಗುತ್ತದೆ. ಎಲ್ಲ ಧರ್ಮಗಳಲ್ಲಿ ಪುರಾಣ ಮತ್ತು ದಂತಕತೆಗಳಿವೆ. ಎಂದೋ ನಡೆದಿರುವ ‌ಪುರಾಣ ಕತೆಗಳಿಗೆ ಕಲಾವಿದರು ಚಿತ್ರದ ಮೂಲಕ ಜೀವ ತುಂಬಿ, ಜನರಲ್ಲಿ ಮತ್ತಷ್ಟು ಪೂಜ್ಯ ಭಾವನೆ ಹುಟ್ಟಿಸುತ್ತಾರೆ. ಇಂತಹ ಪ್ರತಿಭೆ ಹಾಗೂ ಶಕ್ತಿಯನ್ನು ಬೇರೆಯವರಲ್ಲಿ ಕಾಣಲು ಸಾಧ್ಯವಿಲ್ಲ. ನಮ್ಮ ಸಮೃದ್ಧ ಪುರಾಣಗಳು ಜನರಿಗೆ ತಲುಪಲು ಕಲಾವಿದರ ಕುಂಚಸೃಷ್ಟಿಯೇ ಕಾರಣ’ ಎಂದರು.

ADVERTISEMENT

ಹಿರಿಯ ಕಲಾವಿದ ಬಿ.ಕೆ.ಎಸ್. ವರ್ಮಾ ಮಾತನಾಡಿ, ‘ಯಾವತ್ತೂ ಕಲಾವಿದರು ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬಾರದು. ನಮ್ಮ ಕೆಲಸದಿಂದ ಅದು ನಮ್ಮನ್ನು ಹುಡುಕಿಕೊಂಡು ಬರಬೇಕು. ಆ ನಿಟ್ಟಿನಲ್ಲಿ ಶ್ರದ್ಧೆಯಿಂದ ಕಲಾ ಕಾಯಕದಲ್ಲಿ ಯುವ ಕಲಾವಿದರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಕಲಾ ಕ್ಷೇತ್ರದಲ್ಲೂ ಏಳಿರಿತಗಳು ಬರುತ್ತವೆ. ಅವುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಹಾಕುವುದನ್ನು ಕಲಾವಿದರು ಕಲಿಯಬೇಕು’ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ಕಲಾವಿದ ಜಿ.ಎಂ. ಹೆಗಡೆ ಮಾತನಾಡಿ, ‌‘ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಕ್ಷೇತ್ರ ಬಹಳಷ್ಟು ಮುಂದುವರಿದಿದೆ. ಕಲಾವಿದರು ಒಂದೇ ರೀತಿಯ ಶೈಲಿಗೆ ಅಂಟಿಕೊಳ್ಳಬಾರದು. ಎಲ್ಲ ರೀತಿಯ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರಿದ್ದಾರೆ. ಅವರನ್ನು ಗುರುತಿಸಿ, ಮುನ್ನೆಲೆಗೆ ತರುವ ಕೆಲಸವಾಗಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.