
ಬೆಂಗಳೂರು: ‘ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಲ್ಯಾಪ್ಟಾಪ್, ಸ್ಮಾರ್ಟ್ ಎಲ್ಇಡಿ ಬೋರ್ಡ್, ಎಲ್ಇಡಿ ಪ್ರೊಜೆಕ್ಟರ್ ಪೂರೈಕೆಯಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.
ಸಾರ್ವಜನಿಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಯಿಂದ ಬಂದಿದ್ದ ಹಲವು ದೂರುಗಳ ಆಧಾರದಲ್ಲಿ ಲೋಕಾಯುಕ್ತ ಸಂಸ್ಥೆಯು ಪ್ರಕರಣ ದಾಖಲಿಕೊಂಡಿತ್ತು. ತನಿಖೆಯ ಭಾಗವಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು, ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಇಬ್ಬರು ಉಪ ನಿರ್ದೇಶಕರು ಮತ್ತು 12 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿದ್ದರು.
‘ಮಾದರಿ ಪ್ರಾಥಮಿಕ ಶಾಲೆ ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (ಕೆಪಿಎಸ್) ಲ್ಯಾಪ್ಟಾಪ್, ಸ್ಮಾರ್ಟ್ ಎಲ್ಇಡಿ ಬೋರ್ಡ್, ಎಲ್ಇಡಿ ಪ್ರೊಜೆಕ್ಟರ್, ಯುಪಿಎಸ್ ಇನ್ವರ್ಟರ್ ಮತ್ತು ಬ್ಯಾಟರಿಗಳ ಪೂರೈಕೆಗೆ 2025ರ ಏಪ್ರಿಲ್ನಲ್ಲಿ ಟೆಂಡರ್ ಕರೆಯಲಾಗಿತ್ತು. ಈ ಸಾಮಗ್ರಿಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗಿದೆ. ಆದರೆ ಟೆಂಡರ್ ದಾಖಲೆಗಳಲ್ಲಿರುವ ತಾಂತ್ರಿಕ ವಿವರಗಳಿಗೂ, ಶಾಲೆಗಳಿಗೆ ಪೂರೈಸಿರುವ ಸಾಮಗ್ರಿಗಳ ತಾಂತ್ರಿಕ ವಿವರಗಳು ಪರಸ್ಪರ ತಾಳೆಯಾಗುತ್ತಿಲ್ಲ’ ಎಂದು ಲೋಕಾಯುಕ್ತವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
‘ಶಾಲೆಗಳಿಗೆ ಪೂರೈಸಲಾಗಿರುವ ಈ ಎಲ್ಲ ಸಾಮಗ್ರಿಗಳಿಗೆ ಪಾವತಿ ಮಾಡಲಾಗಿರುವ ಮೊತ್ತ ಮತ್ತು ಅದೇ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಈಗಿರುವ ಬೆಲೆಯನ್ನು ಪರಿಶೀಲಿಸಲಾಯಿತು. ಪ್ರತಿ ಲ್ಯಾಪ್ಟಾಪ್ಗೆ ಮಾರುಕಟ್ಟೆ ದರಕ್ಕಿಂತ ₹10,000, ಯುಪಿಎಸ್ ಸಿಸ್ಟಂಗೆ ₹30,000–₹40,000, ಎಲ್ಇಡಿ ಸ್ಮಾರ್ಟ್ ಟಿ.ವಿಗೆ ₹15,000 ಹೆಚ್ಚು ಪಾವತಿ ಮಾಡಲಾಗಿದೆ. ಬೆಂಗಳೂರು ಉತ್ತರ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ 1,438 ಶಾಲೆಗಳಿವೆ’ ಎಂದು ವಿವರಿಸಿದೆ.
‘ಜಾಲಹಳ್ಳಿ ಕೆಪಿಎಸ್ ಶಾಲೆಗೆ ಪೂರೈಸಲಾದ ಲ್ಯಾಪ್ಟಾಪ್ಗಳು ಶಾಲೆಯಲ್ಲಿ ಇಲ್ಲವೇ ಇಲ್ಲ’ ಎಂದು ಲೋಕಾಯುಕ್ತವು ತಿಳಿಸಿದೆ.
ಶಾಲೆಗೆ ಪೂರೈಕೆಯಾಗಿರುವ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ತೋರಿಸುವಂತೆ ಜಾಲಹಳ್ಳಿ ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕಿ ಅವರಿಗೆ ಲೋಕಾಯುಕ್ತರು ಕರೆ ಮಾಡಿ ಸೂಚಿಸಿದ್ದರು. ಆದರೆ, ಆ ಶಿಕ್ಷಕಿ ಅವರು ಹಲವು ಗಂಟೆಗಳ ನಂತರ ವಿಡಿಯೊ ಕಾಲ್ ಸಂಪರ್ಕಕ್ಕೆ ಬಂದು ಯುಪಿಎಸ್, ಸ್ಮಾರ್ಟ್ ಎಲ್ಇಡಿ ಟಿವಿ ಮತ್ತು ಪ್ರೊಜೆಕ್ಟರ್ಗಳನ್ನು ಮಾತ್ರವೇ ತೋರಿಸಿದರು. ಹಲವು ಬಾರಿ ಸೂಚಿಸಿದ ನಂತರವೂ ಲ್ಯಾಪ್ಟಾಪ್ಗಳನ್ನು ತೋರಿಸಲಿಲ್ಲ ಎಂದು ಸಂಸ್ಥೆಯು ಮಾಹಿತಿ ನೀಡಿದೆ. ಬೇರೆ ಶಾಲೆಗಳಲ್ಲೂ ಇದೇ ಸ್ಥಿತಿ ಇರುವ ಸಾಧ್ಯತೆ ಇದೆ. ವಿಸ್ತೃತ ತನಿಖೆಯ ನಂತರ ಅಕ್ರಮದ ಪ್ರಮಾಣ ಗೊತ್ತಾಗಲಿದೆ ಎಂದು ಲೋಕಾಯುಕ್ತವು ಹೇಳಿದೆ.
ಟೆಂಡರ್ ದಾಖಲೆಯಲ್ಲಿ ಸೂಚಿಸಿರುವುದಕ್ಕಿಂತ ಕಡಿಮೆ ಸಂಗ್ರಹಣಾ ಸಾಮರ್ಥ್ಯವಿರುವ (ಇಂಟರ್ನಲ್ ಮೆಮೊರಿ) ಎಲ್ಇಡಿ ಸ್ಮಾರ್ಟ್ ಟಿವಿಗಳನ್ನು ಪೂರೈಸಲಾಗಿದೆ
ಶಾಲೆಗಳಿಗೆ ಪೂರೈಸಲಾದ ಈ ಎಲ್ಲ ಸಾಮಗ್ರಿಗಳ ವಾರಂಟಿ ವಿವರಕ್ಕೆ ಸಂಬಂಧಿಸಿದ ದಾಖಲೆಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಲಭ್ಯವಿಲ್ಲ ಮತ್ತು ಸಾಮಗ್ರಿಗಳ ಮೇಲೂ ನಮೂದಿಸಿಲ್ಲ. ವಾಸ್ತವದಲ್ಲಿ ವಾರಂಟಿ ದಾಖಲೆಗಳನ್ನು ಪಡೆದುಕೊಂಡೇ ಇಲ್ಲ
ಶಾಲೆಗಳಿಗೆ ಎಲ್ಲ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂಬುದಕ್ಕೆ ಮುಖ್ಯ ಶಿಕ್ಷಕರಿಂದ ದೃಢೀಕರಣ ಪತ್ರ ಪಡೆದುಕೊಂಡಿಲ್ಲ. ಇದನ್ನು ಖಚಿತಪಡಿಸಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿಯೇ ಇಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.