ಬೆಂಗಳೂರು: ಭಾರತ ವಿಶ್ವವಿದ್ಯಾಲಯ ಸಂಘಟನೆ (ಎಐಯು) ಸಹಯೋಗದಲ್ಲಿ ಪೀಣ್ಯದಲ್ಲಿರುವ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯವು ‘ಯುವ ಶಕ್ತಿ, ಭಾರತದ ಶಕ್ತಿ’ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿತು.
ಭಾರತಕ್ಕೆ ನೀಡಬಹುದಾದ ಕೊಡುಗೆ ಬಗ್ಗೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.
ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಕುಲದೀಪ್ ಕುಮಾರ್ ರೈನಾ ಮಾತನಾಡಿ, ‘ಎಐಯು ಈ ಅಭಿಯಾನಕ್ಕೆ ದೇಶದಲ್ಲಿ 5 ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಕರ್ನಾಟಕದಿಂದ ಆಯ್ಕೆ ಆಗಿರುವ ಏಕೈಕ ವಿಶ್ವವಿದ್ಯಾಲಯ ನಮ್ಮದು. ನಮ್ಮಲ್ಲಿ 5 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ’ ಎಂದು ವಿವರಿಸಿದರು.
‘ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದಂತೆ ಪ್ರಾಮಾಣಿಕವಾಗಿ ಭಾರತಕ್ಕೆ ಕೊಡುಗೆ ನೀಡುತ್ತಾರೆ ಎಂಬ ನಂಬಿಕೆ ಇದೆ. ಯುವ ಜನರು ಭಾರತದ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಭದ್ರತೆ ಸೇರಿದಂತೆ ಎಲ್ಲಾ ವಿಷಯದಲ್ಲೂ ಕೊಡುಗೆ ನೀಡಲು ಸಿದ್ಧರಿದ್ದೇವೆ ಎಂದು ತೋರಿಸಿದ್ದಾರೆ’ ಎಂದು ಹೇಳಿದರು.
‘ಇತ್ತೀಚಿಗೆ ನಡೆದ ಅಪರೇಷನ್ ಸಿಂಧೂರ ನಮ್ಮೆಲ್ಲರಿಗೂ ಒಂದು ಹೆಮ್ಮೆಯ ವಿಚಾರ ನಾವು ನಮ್ಮ ತಾಯಿ ಮತ್ತು ತಾಯ್ನಾಡು ಎರಡನ್ನೂ ಎಂದಿಗೂ ಮರೆಯಬಾರದು’ ಎಂದರು.
ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಆತ್ಮ ನಿರ್ಭರ್ ಭಾರತ್, ಏಕ್ ಭಾರತ್, ಶ್ರೇಷ್ಠ ಭಾರತ್, ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಜತೆಗೆ ಯುವ ಶಕ್ತಿ, ಭಾರತದ ಶಕ್ತಿ ಕೂಡ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಹಕಾರ ನೀಡಲಿದೆ ಎಂದು ಹೇಳಿದರು.
ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ ಸಹ ಕುಲಪತಿ ಗೋವಿಂದ ಆರ್. ಕಡಂಬಿ, ಅಕಾಡೆಮಿಕ್ ಡೀನ್ ಆರ್.ವಿ. ರಂಗನಾಥ್, ಎಂಜಿನಿಯರಿಂಗ್ ಡೀನ್ ಶರತ್ ಕುಮಾರ್ ಮಹಾರಾಣಾ, ಅಸೋಸಿಯೇಟ್ ಡೀನ್ ಆಕಾಡೆಮಿಕ್ಸ್ ಸೈನಾ ಪಾಟೀಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.