ಬೆಂಗಳೂರು:ಕಾಡುಗಳು ಮತ್ತು ಕಲ್ಲುಬಂಡೆಗಳಿರುವ ನೈಸರ್ಗಿಕ ಆವಾಸಸ್ಥಾನ ಮತ್ತು ದೊಡ್ಡ ಬಲಿ ಪ್ರಾಣಿಗಳು (20 ಕೆ.ಜಿಗಿಂತ ಹೆಚ್ಚು ತೂಕದ ಗೊರಸುಳ್ಳ ಪ್ರಾಣಿಗಳು) ಚಿರತೆಗಳ ಉಳಿವಿಗೆ ಅಗತ್ಯ ಎಂದು ಸಮೀಕ್ಷೆಯೊಂದು ಹೇಳಿದೆ.
ನೇಚರ್ ಕನ್ಸರ್ವೇಷನ್ ಫೌಂಡೇಷನ್ನವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ತಂಡದವರು ಸುಮಾರು 24 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ 2,768 ಕಿ.ಮೀ. ದೂರವನ್ನು ನಡಿಗೆಯಲ್ಲಿ ಕ್ರಮಿಸಿ ಈ ಸಮೀಕ್ಷೆ ನಡೆಸಿದ್ದಾರೆ. ಭೂಪ್ರದೇಶದ ವಿಸ್ತಾರವನ್ನು ಪರಿಗಣಿಸಿದರೆ ಚಿರತೆಗಳ ಬಗ್ಗೆ ದೇಶದಲ್ಲಿ ನಡೆಸಿರುವ ಅತ್ಯಂತ ದೊಡ್ಡ ಸಂಶೋಧನೆ ಇದು ಎಂದು ಫೌಂಡೇಷನ್ ಹೇಳಿಕೊಂಡಿದೆ.
ದೇಶದಲ್ಲಿ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳಾಚೆಯ ಪ್ರದೇಶಗಳಲ್ಲಿ ಚಿರತೆಗಳ ಬಗೆಗಿನ ತಿಳಿವಳಿಕೆ ಅತ್ಯಲ್ಪ. ಚಿರತೆಗಳ ಇರುವಿನ ಸಂಭವ ಎಲ್ಲಿ ಹೆಚ್ಚಿರುತ್ತದೆಂದು ತಿಳಿಯಲು ವಿಜ್ಞಾನಿಗಳು, ನೈಸರ್ಗಿಕ ಆವಾಸ, ದಟ್ಟ ಜನವಸತಿ ಪ್ರದೇಶಗಳು ಮತ್ತು ಮಿಶ್ರ ಪ್ರದೇಶಗಳನ್ನು ಹೋಲಿಸಿ ನೋಡಿದ್ದಾರೆ. ಈ ಪೈಕಿ, ನೈಸರ್ಗಿಕ ಆವಾಸ ಮತ್ತು ಸಾರಂಗ, ಕೊಂಡುಕುರಿ, ಕಡವೆ, ಕಾಡುಕುರಿ, ಕಾಡುಹಂದಿಯಂತಹ ದೊಡ್ಡ ನೈಸರ್ಗಿಕ ಬಲಿ ಪ್ರಾಣಿಗಳಿರುವಲ್ಲಿಯೇ ಚಿರತೆಗಳ ಇರುವಿಕೆ ಹೆಚ್ಚು ಇರುವುದು ತಿಳಿದುಬಂದಿದೆ ಎಂದು ಸಮೀಕ್ಷೆ ಹೇಳಿದೆ.
‘ರಕ್ಷಿತಾರಣ್ಯಗಳಾಚೆಗೂ ಚಿರತೆಗಳು ಉಳಿಯಬೇಕಾದರೆ ಅವುಗಳ ಸಂರಕ್ಷಣೆಗೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಹೊರತೆಗೆಯುವಿಕೆಗೆ ವೈಜ್ಞಾನಿಕವಾಗಿ ವಲಯಗಳನ್ನು ಗುರುತಿಸಬೇಕು’ ಎನ್ನುತ್ತಾರೆ ಸಂಶೋಧನಾ ಪ್ರಬಂಧದ ಪ್ರಧಾನ ಲೇಖಕ ಸಂಜಯ್ ಗುಬ್ಬಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.