ADVERTISEMENT

ಶಾಸಕರು ತಲಾ 3 ಶಾಲೆ ದತ್ತು ಪಡೆಯಲಿ : ಎಂ.ಆರ್‌.ದೊರೆಸ್ವಾಮಿ

ಸರ್ಕಾರಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 19:45 IST
Last Updated 13 ಫೆಬ್ರುವರಿ 2020, 19:45 IST
ಡಾ.ಎಂ.ಆರ್.ದೊರೆಸ್ವಾಮಿ
ಡಾ.ಎಂ.ಆರ್.ದೊರೆಸ್ವಾಮಿ   

ಬೆಂಗಳೂರು: ಶಾಲೆಗಳ ಸುಧಾರಣೆಗಾಗಿ ಶಾಸಕರು ತಲಾ 3 ಹಾಗೂ ಸಂಸದರು ತಲಾ 5 ಶಾಲೆಗಳನ್ನು ದತ್ತು ಪಡೆಯಬೇಕು, ಇದರಿಂದ ಸುಮಾರು 1,100ರಷ್ಟು ಶಾಲೆಗಳಿಗೆ ಮರುಜೀವ ಸಿಗುವುದು ಸಾಧ್ಯವಿದೆ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ಸಲಹೆ ನೀಡಿದ್ದಾರೆ.

ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಾವು ಸರ್ಕಾರಕ್ಕೆ ಸಲ್ಲಿಸಿದ 23 ಪುಟಗಳ ಸಲಹೆಗಳ ಬಗ್ಗೆ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ವಿಶ್ವವಿದ್ಯಾಲಯಕ್ಕೆ ಮೊದಲ ಕುಲಪತಿ ನೇಮಕ ಮಾಡುವಾಗ ಅತ್ಯಂತ ಸಮರ್ಥರನ್ನೇ ಆಯ್ಕೆ ಮಾಡಬೇಕು, ಇದರಿಂದ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಸುಭದ್ರವಾಗುತ್ತದೆ, ಉಳಿದ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವಾಗ ಅರ್ಹತೆಯಷ್ಟೇ ಮಾನದಂಡವಾಗಬೇಕು. ಶೋಧನಾ ಸಮಿತಿ ಅತ್ಯಂತ ಸಮರ್ಥರನ್ನು ಆಯ್ಕೆ ಮಾಡಬೇಕಿದ್ದು, ಭ್ರಷ್ಟಾಚಾರಕ್ಕೆ ಅವಕಾಶ ಕೊಡದಂತೆ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದೇನೆ ಎಂದರು.

ADVERTISEMENT

‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ₹ 100 ಕೋಟಿ ಅನುದಾನ ಒದಗಿಸಲಾಗಿದ್ದರೂ, ಅದನ್ನು ಖರ್ಚು ಮಾಡಿಯೇ ಇಲ್ಲ. ಸಮರ್ಥ ನಾಯಕತ್ವದ ಕೊರತೆಯಿಂದ ಇಂತಹ ತೊಂದರೆಗಳು ಉಂಟಾಗುತ್ತವೆ’ ಎಂದರು.

‘ಉದ್ಯೋಗ ಅವಕಾಶ ಇಲ್ಲದ ಕಾರಣಕೆಲವು ಪದವಿ ತರಗತಿಗಳು ಮುಚ್ಚುತ್ತಿವೆ. ಇದಕ್ಕಾಗಿ ಪದವಿ ಹಂತದಲ್ಲಿ ಉದ್ಯೋಗ ಅವಕಾಶದ ಒಂದು ವಿಷಯವನ್ನು ಸೇರಿಸಿಕೊಳ್ಳುವಂತಹ ಸಿಬಿಸಿಎಸ್‌ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಹೇಳಿದರು.

ಸರ್ಕಾರಕ್ಕೆ ಸಲ್ಲಿಸಲಾದಪ್ರಮುಖ ಸಲಹೆಗಳು

*ಶೈಕ್ಷಣಿಕ ಸಂಸ್ಥೆಗಳಿಗಾಗಿ ಆಡಳಿತಾತ್ಮಕ ನ್ಯಾಯಮಂಡಳಿ ರಚಿಸುವುದು

*ಕಂಪನಿಗಳಶೈಕ್ಷಣಿಕ ದೇಣಿಗೆಗಾಗಿ ರಾಜ್ಯ–ಉದ್ಯಮ ಒಳಗೊಂಡ ಧನಸಹಾಯ ಸಂಸ್ಥೆ ಸ್ಥಾಪಿಸುವುದು

*ಅಂಗವಿಕಲರಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯದ ಸ್ಥಾಪಿಸುವುದು

*ಪರೀಕ್ಷಾ ಕೇಂದ್ರಗಳಿಗೆ ಆನ್‌ಲೈನ್‌ನಲ್ಲಿ ಪ್ರಶ್ನೆಪತ್ರಿಕೆ ರವಾನಿಸುವುದು

*ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಗೆ ಪ್ರತ್ಯೇಕ ಸಮಗ್ರ ಶೈಕ್ಸಣಿಕ ನೀತಿ ರೂಪಿಸುವುದು

*ಶಾಲಾ ಕಾಲೇಜುಗಳಲ್ಲಿ ದೈಹಿಕ ಕ್ಷಮತೆ ಮತ್ತು ಯೋಗವನ್ನು ಉತ್ತೇಜಿಸುವುದು

*ಸಾರ್ವಜನಿಕ ರಜಾ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸುವುದು

*ಶಾಲಾ ಕಾಲೇಜುಗಳಿಂದ ಕನಿಷ್ಠ 1 ಕಿ.ಮೀ.ವ್ಯಾಪ್ತಿಯಲ್ಲಿ ಪಬ್‌, ಬಾರ್‌ಗಳಿಗೆ ನಿಷೇಧ ವಿಧಿಸುವುದು

*ವಿದೇಶಿ ಭಾಷೆ ಕಲಿಯಲು ಉತ್ತೇಜನ ನೀಡುವುದು

***

ಕುಲಪತಿಗಳ ನೇಮಕದಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿವಾರಣೆ ಅಗತ್ಯ. ಇಲ್ಲೇ ಅಡಗಿದೆ ಉನ್ನತ ಶಿಕ್ಷಣದ ಭವಿಷ್ಯ
-ಪ್ರೊ.ಎಂ.ಆರ್‌.ದೊರೆಸ್ವಾಮಿ, ಸರ್ಕಾರದ ಉನ್ನತ ಶಿಕ್ಷಣ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.