ADVERTISEMENT

‘ಕೋವಿಡ್ ವೇಳೆ ಶೈಕ್ಷಣಿಕ ಕ್ರಾಂತಿ ನಡೆಯಲಿ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 19:02 IST
Last Updated 13 ಆಗಸ್ಟ್ 2021, 19:02 IST

ಬೆಂಗಳೂರು: ‘ದೆಹಲಿಯಂತೆ ಕರ್ನಾಟಕ ಸರ್ಕಾರವೂ ಕೋವಿಡ್‌ ಸಂದರ್ಭವನ್ನು ಶೈಕ್ಷಣಿಕ ಕ್ರಾಂತಿಗೆ ಬಳಸಿಕೊಳ್ಳಬೇಕು’ ಎಂದುಆಮ್‌ ಆದ್ಮಿ ಪಕ್ಷದ (ಎಎಪಿ) ದೆಹಲಿ ಶಾಸಕಿ ಅತಿಶಿ ಮರ್ಲೆನಾ ಸಲಹೆ ನೀಡಿದರು.

ಎಎಪಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಸಂವಾದದಲ್ಲಿ ಅವರು ಮಾತನಾಡಿದರು.

‘ಏಳು ವರ್ಷಗಳ ಹಿಂದೆ ಕರ್ನಾಟಕದ ಸರ್ಕಾರಿ ಶಾಲೆಗಳಂತೆಯೇ ದೆಹಲಿ ಶಾಲೆಗಳಿದ್ದವು. ಅಲ್ಲಿಯೂ ಮೂಲ ಸೌಕರ್ಯಗಳು ಇರಲಿಲ್ಲ. ಶಿಕ್ಷಣ ಕ್ರಾಂತಿಗಾಗಿ ಬಜೆಟ್‌ನಲ್ಲಿ ಶೇ 25ರಷ್ಟು ಹಣವನ್ನು ಮೀಸಲಿಟ್ಟು, ಸಮರ್ಪಕವಾಗಿ ಬಳಕೆ ಮಾಡಲಾಯಿತು. ಇದರಿಂದ ಅಲ್ಲಿನ ಶಿಕ್ಷಣ ವ್ಯವಸ್ಥೆಯೇ ಬದಲಾಯಿತು’ ಎಂದರು.

ADVERTISEMENT

‘ಶಿಕ್ಷಣದಲ್ಲಿ ಬದಲಾವಣೆ ತರಬೇಕೆಂಬ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದರೆ ಸಾಕು. ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಶಿಕ್ಷಣ ಆದ್ಯತೆಯ ವಿಷಯವೇ ಆಗಿಲ್ಲ. ಕೋವಿಡ್‌ ನಂತರ ಶಿಕ್ಷಣ ವ್ಯವಸ್ಥೆಯೇ ದೇಶಕ್ಕೆ ಹೆಚ್ಚು ಮಾರಕವಾಗಿದೆ’ ಎಂದು ದೂರಿದರು.

‘ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ನೋಡುವ ರೀತಿ ಬದಲಾಗಬೇಕು. ಖಾಸಗಿ ಶಾಲೆಗಳ ಲಾಬಿಗೆ ಮಣಿಯದೆ, ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಹಾಗೂ ಬೋಧನಾ ಗುಣಮಟ್ಟವನ್ನು ಅಭಿವೃದ್ಧಿ ಪಡಿಸಬೇಕು’ ಎಂದು ಒತ್ತಾಯಿಸಿದರು.

ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ, ಮುಖಂಡರಾದ ಎಚ್‌.ಡಿ.ಬಸವರಾಜು, ಶಿಕ್ಷಣ ತಜ್ಞ ಗುರುರಾಜ ಕರಜಗಿ, ತಾನ್ಯಾ ಜಯರಾಜ್‌, ಪುಷ್ಪಾ ತಂತ್ರಿ, ಬಿ.ಎಸ್.ಸೂರ್ಯಪ್ರಕಾಶ್‌ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.