ADVERTISEMENT

ಜಾತಿವಾರು ಸಮೀಕ್ಷೆ | ಲಿಂಗಾಯತ ಎಂದೇ ನಮೂದಿಸಿ: ಸ್ವಾಮೀಜಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 14:37 IST
Last Updated 17 ಸೆಪ್ಟೆಂಬರ್ 2025, 14:37 IST
   

ಬೆಂಗಳೂರು: ಜಾತಿವಾರು ಸಮೀಕ್ಷೆಯ ವೇಳೆ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ನಮೂದಿಸಬೇಕು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೇಳಿವೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು, ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ, ಬೆಳಗಾವಿ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ‘ಜಾತಿವಾರು ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಹಾಗೂ ‘ಹಿಂದೂ’ಗಳೆಂದು ನಮೂದಿಸಬಾರದು’ ಎಂದು ಹೇಳಿದರು. 

‘ಲಿಂಗಾಯತ ಪ್ರತ್ಯೇಕ ಸ್ವತಂತ್ರ ಧರ್ಮವಾಗಿದ್ದು, ಇದರಲ್ಲಿ 97 ಉಪ ಪಂಗಡಗಳಿವೆ. ಇದುವರೆಗೂ ನಡೆದ ಜಾತಿ ಗಣತಿಗಳಲ್ಲಿ ಅರಿವಿನ ಕೊರತೆಯಿಂದ ಲಿಂಗಾಯತರು ತಮ್ಮ ಧರ್ಮವನ್ನು ಹಿಂದೂ ಎಂದು ಬರೆಯಿಸಿದ್ದಾರೆ. 2027ರ ಮಾರ್ಚ್‌ನಲ್ಲಿ ನಡೆಯಲಿರುವ ಜಾತಿ ಜನಗಣತಿಯಲ್ಲಿ ಎಲ್ಲ ಲಿಂಗಾಯತರು ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ನಮೂದಿಸಬೇಕು. ಹಿಂದೂಗಳೆಂದು ಬರೆಯಿಸಬಾರದು. ಜಾತಿಯ ಕಾಲಂನಲ್ಲಿ ಉಪ ಪಂಗಡಗಳ ಹೆಸರು ಬರೆಯಿಸಬೇಕು. ಎಲ್ಲ ಲಿಂಗಾಯತರು ಹಿಂದೂಗಳೆಂದು ಬರೆಯಿಸುವಂತೆ ಹೇಳುವ ಮೂಲಕ ಕೆಲ ಲಿಂಗಾಯತ ವಿರೋಧಿ ಸಂಸ್ಥೆಗಳು ದಾರಿ ತಪ್ಪಿಸುತ್ತಿವೆ’ ಎಂದು ದೂರಿದರು. 

ADVERTISEMENT

‘2023ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆ ಕೂಡ ಲಿಂಗಾಯತರು ಹಿಂದೂಗಳಲ್ಲವೆಂದು ಸ್ಪಷ್ಟವಾಗಿ ಹೇಳಿದೆ. 2002ರಲ್ಲಿ ಜಾತಿಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶದಲ್ಲಿ ರಾಜ್ಯ ಸರ್ಕಾರವು ಕೆಲವರ ಒತ್ತಾಯಕ್ಕೆ ಮಣಿದು ವೀರಶೈವ ಲಿಂಗಾಯತವೆಂದು ಅಧಿಸೂಚನೆ ಹೊರಡಿಸಿದ್ದು ತಪ್ಪು’ ಎಂದರು.

‘ಲಿಂಗಾಯತ ಧರ್ಮದಲ್ಲಿ 97 ಉಪ ಪಂಗಡಗಳಿದ್ದು, ವೀರಶೈವ ಒಂದು ಉಪ ಪಂಗಡ ಮಾತ್ರ. ವೀರಶೈವದಲ್ಲಿ ಲಿಂಗಾಯತವಿಲ್ಲ. ಆದ್ದರಿಂದ ‘ವೀರಶೈವ ಲಿಂಗಾಯತ’ ಎನ್ನುವುದು ತಪ್ಪು. ಇದೇ ತಪ್ಪನ್ನು ಅಖಿಲ ಭಾರತ ವೀರಶೈವ ಮಹಾಸಭೆಯು ಮುಂದುವರಿಸುತ್ತಿದೆ. ಇದರಲ್ಲಿ ಆ ಸಂಘಟನೆಗಳ ಪದಾಧಿಕಾರಿಗಳ ರಾಜಕೀಯ ಹಿತಾಸಕ್ತಿ ಅಡಗಿದೆ. ಇಂತಹ ರಾಜಕಾರಣಿಗಳ ಮಾತನ್ನು ಲಿಂಗಾಯತರು ಕೇಳಬಾರದು’ ಎಂದು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.