ADVERTISEMENT

ಕೊರೊನಾ ಜೊತೆ ಬದುಕೋಣ: ಕ್ಷೀಣಿಸುತ್ತಿದೆ ಕೊರೊನಾ ಶಕ್ತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 20:44 IST
Last Updated 20 ಸೆಪ್ಟೆಂಬರ್ 2020, 20:44 IST
ಡಾ. ರತ್ನಪ್ರಭಾ 
ಡಾ. ರತ್ನಪ್ರಭಾ    

ಬೆಂಗಳೂರು: ‘ಕೊರೊನಾ ಸೋಂಕಿನ ಶಕ್ತಿ ಕ್ಷೀಣಿಸುತ್ತಿದೆ. ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ ಸಾವಿನ ಪ್ರಮಾಣ ತುಂಬಾ ಕಡಿಮೆಯಾಗಿದೆ. ಮೊದಲು ಶೇ 2.3ರಷ್ಟಿದ್ದಮರಣ ಪ್ರಮಾಣ ಈಗ ಶೇ 1ರಷ್ಟಿದೆ. ಸೋಂಕಿನ ಕುರಿತು ಎಲ್ಲರಲ್ಲಿ ಅರಿವು ಮೂಡಿರುವುದರಿಂದ ಕೋವಿಡ್‌ ಜೊತೆ ಬದುಕುವುದು ಸಾಮಾನ್ಯವಾಗಲಿದೆ’ ಎನ್ನುತ್ತಾರೆ ಹೆಸರಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆರ್. ರತ್ನಪ್ರಭಾ.

‘ಕೋವಿಡ್‌ ಆರೈಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನನಗೆ ಸೋಂಕು ತಗುಲಿತ್ತು. ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಆರೈಕೆ ಪಡೆದೆ. ಔಷಧಿ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿದಿದ್ದರಿಂದ ಹೆಚ್ಚಿನ ಸಮಸ್ಯೆಯಾಗಲಿಲ್ಲ’ ಎಂದು ಅವರು ಹೇಳಿದರು.

‘ಸೋಂಕಿನ ಲಕ್ಷಣಗಳು ಇರಲಿಲ್ಲ. ಜ್ವರವೂ ಬಂದಿರಲಿಲ್ಲ.ಶೀತ ಮಾತ್ರ ಇತ್ತು. ಪ್ರಾರಂಭಿಕ ಹಂತದಲ್ಲಿಯೇ ಸೋಂಕು ಪತ್ತೆಯಾದರೆ, ಸೂಕ್ತ ಕ್ರಮಗಳನ್ನು ವಹಿಸಿದರೆ ಬೇಗ ಗುಣಮುಖರಾಗಬಹುದು. ದೇಹದಲ್ಲಿ ಸೋಂಕಿನ ಪ್ರಭಾವ, ಪ್ರಮಾಣ ಹೆಚ್ಚಾದಾಗ ಆರೋಗ್ಯ ಸ್ಥಿತಿ ಗಂಭೀರವಾಗುವಸಾಧ್ಯತೆ ಇರುತ್ತದೆ.ಸೋಂಕು ಪತ್ತೆ ಬೇಗ ಆದರೆ, ಬಹುತೇಕರು ಶೀಘ್ರವಾಗಿ ಗುಣ ಹೊಂದುತ್ತಾರೆ’ ಎಂದರು.

ADVERTISEMENT

‘ಮನೆಯಲ್ಲಿಯೇ ಆರೈಕೆ ಪಡೆಯುವವರು (ಹೋಂ ಐಸೊಲೇಷನ್‌) ಮನೆಯ ಇತರ ಸದಸ್ಯರೊಂದಿಗೆ ಬೆರೆಯಬಾರದು. ಊಟ–ಉಪಾಹಾರಕ್ಕೆ ಪ್ರತ್ಯೇಕ ತಟ್ಟೆ, ಲೋಟ ಬಳಸಬೇಕು. ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಶೌಚಾಲಯ ಇದ್ದರೆ ಉತ್ತಮ. ಒಂದೇ ಶೌಚಾಲಯವಿದ್ದರೆ, ಸೋಂಕಿತರು ಬಳಸಿದ ನಂತರ, ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಉಳಿದವರು ಬಳಸಬೇಕು. ಆಗ, ಮನೆಯವರಿಗೂ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ’ ಎಂದು ಅವರು ಸಲಹೆ ನೀಡಿದರು.

‘ಮಾರ್ಚ್‌–ಏಪ್ರಿಲ್‌ನಲ್ಲಿ ಇದ್ದ ಭಯ ಈಗ ಇಲ್ಲ. ಕೆಲಸ ಮಾಡುವ ವೇಳೆ ಹೆಚ್ಚು ಒತ್ತಡಕ್ಕೆ ಒಳಗಾಗಬಾರದು. ಒತ್ತಡಕ್ಕೆ ಒಳಗಾದರೆ ರೋಗ

ರೋಧಕ ಶಕ್ತಿಯೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸಮಯಕ್ಕೆ ಸರಿಯಾಗಿ ನಿದ್ದೆ, ಊಟದ ಕಡೆಗೂ ಗಮನ ಕೊಡಬೇಕು’ ಎಂದು ರತ್ನಪ್ರಭಾ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.