ADVERTISEMENT

ಬೆಂಗಳೂರು: ಸಾಲದ ವಿಚಾರ; ಚಿಕ್ಕಮ್ಮನ ಮಗನನ್ನೇ ಕೊಂದ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:16 IST
Last Updated 27 ಜುಲೈ 2021, 4:16 IST

ಬೆಂಗಳೂರು: ಕೆಂಪೇಗೌಡ ನಗರ ಠಾಣೆ ವ್ಯಾಪ್ತಿಯಲ್ಲಿ ವಿನೋದ್‌ಕುಮಾರ್ (31) ಎಂಬುವರನ್ನು ಸೋಮವಾರ ಕೊಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಅರುಣ್‌ಕುಮಾರ್ (34) ಎಂಬಾತನನ್ನು ಬಂಧಿಸಲಾಗಿದೆ.

‘ರಾಣಾಸಿಂಗ್‌ಪೇಟೆ ನಿವಾಸಿ ವಿನೋದ್ ಹಾಗೂ ಅರುಣ್ ಇಬ್ಬರೂ ಸಂಬಂಧಿಕರು. ಸಾಲದ ವಿಚಾರವಾಗಿ ಗಲಾಟೆ ನಡೆದು ಕೊಲೆ ಆಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಅರುಣ್, ತನ್ನ ಚಿಕ್ಕಮ್ಮನ ಮಗನಾದ ವಿನೋದ್ ಅವರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದ. ಅವಿವಾಹಿತರಾಗಿದ್ದ ವಿನೋದ್, ಹಸು ಸಾಕುತ್ತಿದ್ದರು. ಗಾರೆ ಕೆಲಸ ಸಹ ಮಾಡುತ್ತಿದ್ದರು. ಹಲವು ವರ್ಷವಾದರೂ ವಿನೋದ್ ಸಾಲ ವಾಪಸು ಕೊಟ್ಟಿರಲಿಲ್ಲ.’

ADVERTISEMENT

‘ಸಾಲದ ವಿಚಾರವಾಗಿ ಸೋಮವಾರ ಬೆಳಿಗ್ಗೆ ಜಗಳವಾಗಿತ್ತು. ಇಬ್ಬರೂ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಸೋಮವಾರ ಮಧ್ಯಾಹ್ನ ಮನೆ ಬಳಿ ಪುನಃ ಗಲಾಟೆ ಆಗಿತ್ತು. ಇದೇ ಸಂದರ್ಭದಲ್ಲೇ ಆರೋಪಿ ಅರುಣ್, ಚಾಕುವಿನಿಂದ ವಿನೋದ್ ಅವರಿಗೆ ಇರಿದಿದ್ದ. ತೀವ್ರ ಗಾಯಗೊಂಡು ವಿನೋದ್ ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.