ಬೆಂಗಳೂರು: ಮುನ್ನೇಕೊಳಾಲು ಬಳಿಯ ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಲಾರಿ ಚಕ್ರ ಮೈ ಮೇಲೆ ಹರಿದು ಸೆಕ್ಯುರಿಟಿ ಸಿಬ್ಬಂದಿ ಮಹೇಶ್ (24) ಮೃತಪಟ್ಟಿದ್ದಾರೆ.
‘ಜಾರ್ಖಂಡ್ನ ಮಹೇಶ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಖಾಸಗಿ ಏಜೆನ್ಸಿಯೊಂದರಲ್ಲಿ ಸೆಕ್ಯುರಿಟಿ ಸಿಬ್ಬಂದಿ ಆಗಿ ಕೆಲಸಕ್ಕೆ ಸೇರಿದ್ದರು. ಕಾಮಗಾರಿ ಸ್ಥಳದಲ್ಲಿ ಸಾಮಗ್ರಿಗಳನ್ನು ಕಾಯುವ ಕರ್ತವ್ಯಕ್ಕೆ ಅವರನ್ನು ನಿಯೋಜಿಸಲಾಗಿತ್ತು. ಅದೇ ಸ್ಥಳದಲ್ಲಿ ಮಂಗಳವಾರ ರಾತ್ರಿ ಈ ಅವಘಡ ಸಂಭವಿಸಿದೆ’ ಎಂದು ಎಚ್ಎಎಲ್ ಸಂಚಾರ ಠಾಣೆ ಪೊಲೀಸ್ ಮೂಲಗಳು ಹೇಳಿವೆ.
‘ಮಹೇಶ್ ಹಾಗೂ ಮತ್ತೊಬ್ಬ ಸೆಕ್ಯುರಿಟಿ ಸಿಬ್ಬಂದಿ ಸ್ಥಳದಲ್ಲಿದ್ದರು. ತಡರಾತ್ರಿ 1 ಗಂಟೆ ಸುಮಾರಿಗೆ ನಿದ್ದೆಗೆ ಜಾರಿದ್ದರು. ಅದೇ ಸಂದರ್ಭದಲ್ಲಿ ಟಿಪ್ಪರ್ ಲಾರಿಯೊಂದು ಸ್ಥಳಕ್ಕೆ ಬಂದಿತ್ತು. ಮಲಗಿದ್ದ ಸೆಕ್ಯುರಿಟಿ ಸಿಬ್ಬಂದಿಯನ್ನು ಚಾಲಕ ನೋಡಿರಲಿಲ್ಲ. ಲಾರಿ ಹಿಂದಕ್ಕೆ ಚಲಿಸಲು ಮುಂದಾಗಿದ್ದ. ಅವಾಗಲೇ ಲಾರಿ ಚಕ್ರ ಸೆಕ್ಯುರಿಟಿ ಸಿಬ್ಬಂದಿ ಮೇಲೆ ಹರಿದಿತ್ತು.’
‘ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಸಿಬ್ಬಂದಿಗೂ ಗಾಯವಾಗಿದ್ದು, ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.