ಬೆಂಗಳೂರು: ಒಡಿಶಾದ 25ರ ಹರೆಯದ ಯುವತಿ ಮೇಲೆ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿ ಗಂಭೀರ ಸ್ಥಿತಿಯಲ್ಲಿ ಮಾರತ್ತಹಳ್ಳಿ ಸೇತುವೆ ಬಳಿಯ ಹೊರವರ್ತುಲ ರಸ್ತೆಯಲ್ಲಿ ಬುಧವಾರ ನಸುಕಿನ 2.30ರ ಸುಮಾರಿಗೆ ಪತ್ತೆಯಾಗಿದ್ದಾನೆ.
ಆರೋಪಿಯನ್ನು ಒಡಿಶಾ ನಿವಾಸಿ, ನಗರದ ಖಾಸಗಿ ಕಂಪನಿಯೊಂದರ ಸಾಫ್ಟ್ ವೇರ್ ಎಂಜಿನಿಯರ್ ಅಮರೇಂದ್ರ ಪಟ್ಟನಾಯಕ್ (33) ಎಂದು ಗುರುತಿಸಲಾಗಿದೆ. ಈತನನ್ನು ಸಾಕ್ರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಕತ್ತಿನ ಭಾಗದಲ್ಲಿ ಕೊಯ್ದುಕೊಂಡಂತೆ ಕಾಣುತ್ತಿದೆ. ದೇಹದ ಮೇಲೆ ಅಪಘಾತದಿಂದ ಅಗಿರುವ ಗಾಯಗಳು ಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಆರೋಪಿಯ ಕೈಬರಹ ಇರುವ 17 ಪುಟಗಳ ನೋಟ್ ಪುಸ್ತಕ ಸಿಕ್ಕಿದೆ. ಅದರ ಕೊನೆಯ ಪುಟದಲ್ಲಿ ತನ್ನ ಕೊನೆ ಆಸೆಯ ಬಗ್ಗೆ ಉಲ್ಲೇಖಿಸಿದ್ದು, ಮರಣಪತ್ರದಂತೆ ಕಾಣುತ್ತಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಆದರೆ, ಈ ಟಿಪ್ಪಣಿಗೂ ವಾಸ್ತವಕ್ಕೂ ತಾಳೆ ಆಗುತ್ತಿಲ್ಲ. ಆರೋಪಿ ಗುಣಮುಖವಾದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.
ಪಟ್ಟನಾಯಕ್ ಮಂಗಳವಾರ ಸಂಜೆ ಆರು ಗಂಟೆ ಸುಮಾರಿಗೆ ತನ್ನ ಪ್ರೇಯಸಿ ಪ್ರಿಯದರ್ಶಿನಿಯ ಹತ್ಯೆಗೆ ಯತ್ನಿಸಿದ್ದ. ಒಡಿಶಾದ ಈ ಯುವತಿ ನಿಮ್ಹಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳಿಂದ ನಗರದಲ್ಲಿದ್ದಾರೆ. ಇವರು ತಂಗಿರುವ ‘ಪೇಯಿಂಗ್ ಗೆಸ್ಟ್’ (ಪಿ.ಜಿ) ಮುಂಭಾಗದಲ್ಲೇ ನಡೆದಿದೆ. 7.65ಎಂ.ಎಂ ನಾಡ ಪಿಸ್ತೂಲ್ನಿಂದ ಒಂದು ಸುತ್ತು ಗುಂಡು ಹಾರಿಸಲಾಗಿತ್ತು. ಯುವತಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.