ಹೆಸರಘಟ್ಟ: ದಾಸನಪುರ ಹೋಬಳಿಯ ಮಾದಾವರ ಗ್ರಾಮದ ಕೆರೆ ಹದಿನೈದು ವರ್ಷಗಳ ಬಳಿಕ ತುಂಬಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.
‘ಖಾಸಗಿ ಸಂಸ್ಥೆಯವರು ಕೆರೆಯ ಜಾಗ ಒತ್ತುವರಿ ಮಾಡಿದ್ದು, ಒತ್ತುವರಿ ಜಾಗಕ್ಕೆ ನೀರು ಹರಿಯುತ್ತದೆ ಎಂಬ ಉದ್ದೇಶದಿಂದ ಕೆರೆ ಕೋಡಿ ಒಡೆದು ಹಾಕಿದ್ದರು. ಹಾಗಾಗಿ ಹದಿನೈದು ವರ್ಷಗಳಿಂದ ಕೆರೆಯಲ್ಲಿ ನೀರು ಸಂಗ್ರಹವಾಗದೇ ಹರಿದು ಹೋಗುತ್ತಿತ್ತು. ಈ ಸಾರಿ ಗ್ರಾಮಸ್ಥರೆಲ್ಲ ಸೇರಿ ಕೋಡಿ ಕಟ್ಟಿ, ರಕ್ಷಿಸಿದ್ದೇವೆ. ಹಾಗಾಗಿ ಕೆರೆಯಲ್ಲಿ ನೀರು ಸಂಗ್ರಹವಾಯಿತು’ ಎನ್ನುತ್ತಾರೆ ಗ್ರಾಮದ ನಿವಾಸಿ ರಾಮಕೃಷ್ಣ.
‘ಮಳೆ ಬಂದು ನೀರು ಸಂಗ್ರಹವಾಗ ತೊಡಗಿದಾಗ ರಾತ್ರಿ ಹೊತ್ತು ಕೆಲವು ಕಿಡಿಗೇಡಿಗಳು ಕೋಡಿಯನ್ನು ಕೆಡವಿ ಹಾಕಲು ಯತ್ನಿಸಿದರು. ಆದರೆ, ಗ್ರಾಮಸ್ಥರು ಪ್ರತಿ ರಾತ್ರಿ ಕೋಡಿ ಕಾಯುವ ಕೆಲಸ ಮಾಡಿದ್ದೇವೆ. ಕೆರೆಯಲ್ಲಿ ನೀರು ನಿಂತರೆ ಅಕ್ಕಪಕ್ಕ ಇರುವ ಸುಮಾರು ನಲವತ್ತು ಎಕರೆಯ ಅಂತರ್ಜಲ ಹೆಚ್ಚುತ್ತದೆ ಎಂಬ ಉದ್ದೇಶದಿಂದ ಕೋಡಿ ಕಾದು ನೀರು ಸಂಗ್ರಹವಾಗುವಂತೆ ನೋಡಿ ಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.
‘ಐತಿಹಾಸಿಕ ಮಹತ್ವ ಇರುವ ಈ ಕೆರೆಯನ್ನು ಅಭಿವೃದ್ದಿ ಪಡಿಸಲು ಜನಪ್ರತಿನಿಧಿಗಳು ಮನಸ್ಸು ಮಾಡಲಿಲ್ಲ. ಲೋಕಾಯುಕ್ತ ಕೋರ್ಟ್ ಒತ್ತುವರಿ ತೆರವುಗೊಳಿಸುವಂತೆ ತೀರ್ಪು ನೀಡಿದೆ. ಆದರೆ, ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿಲ್ಲ. ಈ ಕಾರಣಕ್ಕಾಗಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಕೆರೆಯ ಒತ್ತುವರಿ ತೆರವುಗೊಳಿಸಿ, ಅಭಿವೃದ್ದಿ ಪಡಿಸುವಂತೆ ಮನವಿ ಮಾಡಿದ್ದೇವೆ. ಮೋದಿಯವರು ನಮ್ಮ ಪತ್ರಕ್ಕೆ ಸ್ಪಂದಿಸಿದ್ದಾರೆ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.