ADVERTISEMENT

ಅಧ್ಯಯನಕಾರರಿಗೆ ಸಾಮಾಜಿಕ ಕಾಳಜಿ ಮುಖ್ಯ

ಪತ್ರಕರ್ತ ಮಹಾದೇವ ಪ್ರಕಾಶ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 18:57 IST
Last Updated 1 ಡಿಸೆಂಬರ್ 2018, 18:57 IST
ಸಮ್ಮಿಲನ ಕಾರ್ಯಕ್ರಮದಲ್ಲಿ ಪತ್ರಕರ್ತ ಮಹಾದೇವ ಪ್ರಕಾಶ್ ಮತ್ತು ಸಿಂಡಿಕೇಟ್ ಸದಸ್ಯ ವಸಂತ ಕುಮಾರ್ ಅವರಿಗೆ ಪ್ರೊ.ಬಿ.ಸಿ.ಮೈಲಾರಪ್ಪ ಸನ್ಮಾಸಿದರು. ಡಾ.ಸುಧಾ ಇದ್ದಾರೆ.
ಸಮ್ಮಿಲನ ಕಾರ್ಯಕ್ರಮದಲ್ಲಿ ಪತ್ರಕರ್ತ ಮಹಾದೇವ ಪ್ರಕಾಶ್ ಮತ್ತು ಸಿಂಡಿಕೇಟ್ ಸದಸ್ಯ ವಸಂತ ಕುಮಾರ್ ಅವರಿಗೆ ಪ್ರೊ.ಬಿ.ಸಿ.ಮೈಲಾರಪ್ಪ ಸನ್ಮಾಸಿದರು. ಡಾ.ಸುಧಾ ಇದ್ದಾರೆ.   

ಬೆಂಗಳೂರು: ‘ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸದ ಮನೋಸ್ಥಿತಿ ಉಳ್ಳವರು ಸಮಾಜ ವಿಜ್ಞಾನವನ್ನು ಅಭ್ಯಾಸ ಮಾಡುವುದು ತರವಲ್ಲ’ ಎಂದು ಪತ್ರಕರ್ತ ಮಹಾದೇವ ಪ್ರಕಾಶ್ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಹಿರಿಯ ಮತ್ತು ಕಿರಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ’ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮನುಷ್ಯರ ನಡುವಿನ ಸಂಬಂಧಗಳನ್ನು ಅರಿಯುವ ಪ್ರಯತ್ನವೇ ಸಮಾಜಶಾಸ್ತ್ರದ ಮೂಲ ಉದ್ದೇಶ. ಮಹಾಭಾರತದ ಕಾಲದಿಂದಲೂ ರಾಷ್ಟ್ರದಲ್ಲಿ ಸಾಮಾಜಿಕ ಅಸಮಾನತೆಗಳು ಹಾಸು ಹೊಕ್ಕಾಗಿವೆ. ಇಂತಹ ವಿಕೃತಿಗಳ ವಿರುದ್ಧ ವಿದ್ಯಾರ್ಥಿಗಳು ದನಿ ಎತ್ತುವ ಮೂಲಕ ಸತ್ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಹೇಳಿದರು.

ADVERTISEMENT

‘ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಸಮಾಜ ಸುಧಾರಣೆಗೆ ಶಿಕ್ಷಣಕ್ಕಿಂತ ಹರಿತವಾದ ಮತ್ತೊಂದು ಅಸ್ತ್ರವಿಲ್ಲ. ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡು ಅಧ್ಯಯನ ಕಡೆ ಆಸಕ್ತಿ ತೋರಿದರೆ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ’ ಎಂದು ಸಿಂಡಿಕೇಟ್ ಸದಸ್ಯ ವಸಂತ ಕುಮಾರ್ ಹೇಳಿದರು.
ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಬೆಂ.ವಿ.ವಿ. ದೂರಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಪ್ರೊ.ಬಿ.ಸಿ.ಮೈಲಾರಪ್ಪ ಮಾತನಾಡಿ, ಯಾವ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಗೊಂದಲ ನಮ್ಮನ್ನು ಇಂದಿಗೂ ಕಾಡುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂವಿಧಾನದಲ್ಲಿ ನೂರಾರು ಕಾಯ್ದೆಗಳು ಅಡಕವಾಗಿದೆ. ಇದಕ್ಕೆ ಪರ್ಯಾಯವೆಂಬಂತೆ ದೇಶದಲ್ಲಿ ನೂರಾರು ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿರುವುದು ವಿಪರ್ಯಾಸ’ ಎಂದರು. ಇದೇ ವೇಳೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಧ್ಯಾಪಕಿ ಡಾ.ಸುಧಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.