ಬೆಂಗಳೂರು: ಸಂಸ್ಕೃತಿ, ಸಂಪ್ರದಾಯ, ಕಲೆ, ಆಚರಣೆ, ಹಬ್ಬ ಹರಿದಿನಗಳು ನಮ್ಮ ಹೆಮ್ಮೆಯ ಪ್ರತೀಕ ಎಂದು ಪೊಲೀಸ್ ಉಪಆಯುಕ್ತ ಅನುಚೇತನ ಹೇಳಿದರು.
ರಾಜರಾಜೇಶ್ವರಿ ನಗರದಲ್ಲಿ ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂತೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನೃತ್ಯ, ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕವಿ ಎಚ್.ಎಸ್.ವೆಂಕಟೇಶಮೂರ್ತಿ, ‘ಪ್ರಕೃತಿ, ನಾಡು, ನದಿ, ಪರಿಸರ ಕಲೆಯನ್ನು ಸ್ತ್ರೀರೂಪದಲ್ಲಿ ಕಾಣುತ್ತೇವೆ. ಪ್ರಕೃತಿಯೇ ನಮ್ಮ ಪರಂಪರೆಯ ಉಳಿಯುವಿಕೆಗೆ ಕಾರಣ. ಮಹಿಳೆಗೆ ಸಮಪಾಲು, ಸಮಾನ ಗೌರವ, ಅಧಿಕಾರ ನೀಡಬೇಕು. ಆಗ ಮಾತ್ರ ಗ್ರಾಮೀಣ ಸಂಸ್ಕೃತಿ, ಇತಿಹಾಸ ಉಳಿಯುವ ಮೂಲಕ ಕಲಾಪ್ರೇಮ, ರಾಷ್ತ್ರಪ್ರೇಮ, ಸಂಸ್ಕೃತಿ ಉಳಿಯುತ್ತದೆ ಎಂದರು.
ವಿಶ್ವ ಒಕ್ಕಲಿಗ ಮಠದ ಶ್ರೀಕುಮಾರ ಚಂದ್ರಶೇಖರಸ್ವಾಮಿ, ಸಮಾಜ ಸೇವಕ ಎಸ್.ಕಾಂತರಾಜು, ಬಿಬಿಎಂಪಿ ಸದಸ್ಯೆ ನಳಿನಿ ಮಂಜು, ನಗರಸಭೆ ಮಾಜಿ ಸದಸ್ಯ ನರಸಿಂಹಯ್ಯ ಮಾತನಾಡಿದರು.
ಬಿಬಿಎಂಪಿ ಮಾಜಿ ಸದಸ್ಯರು ಆಗಿರುವ ಸಂಘದ ಅಧ್ಯಕ್ಷ ಜಿ.ಎಚ್.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಅಹಲ್ಯಾ ಮಾತೃ ಮಂಡಳಿ, ಭುವನೇಶ್ವರಿ ಮಹಿಳಾ ವಿಭಾಗ, ಆರ್.ಆರ್.ಡಬ್ಲ್ಯು.ಎ ಮಹಿಳಾ ತಂಡಗಳಿಂದ ನೃತ್ಯ, ನಾಟಕ ಸಂಗೀತ ಕಾರ್ಯಕ್ರಮನಡೆಯಿತು.
ಸಂಕ್ರಾಂತಿ ಸಂತೆಯಲ್ಲಿ ವಿವಿಧ ಕರಕುಶಲ ಜವಳಿ, ಗುಡಿಕೈಗಾರಿಕೆ, ಸಾವಯವ ಪದ್ಧತಿಯ ಆಹಾರ ಮಾರಾಟ ಮೇಳ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.