ಬೆಂಗಳೂರು: ಕಾರ್ಮಿಕ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಶುಕ್ರವಾರ ಬಂಧಿಸಿರುವ ‘ಭ್ರಷ್ಟಾಚಾರ ನಿಗ್ರಹ ದಳ’ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿದ್ದ ₹ 13,09,500 ನಗದು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎನ್.ವಿ. ಗೋವಿಂದರಾಜಲು ಮತ್ತು ವೆಂಕಟೇಶ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಲ್ಯಾಪ್ಟಾಪ್, ನಾಲ್ಕು ಮೊಬೈಲ್ ಫೋನ್ ಮತ್ತು ಮೂರು ಪೆನ್ ಡ್ರೈವ್ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರು, ಇನ್ನಿಬ್ಬರು ಕಾರ್ಮಿಕ ಅಧಿಕಾರಿಗಳಾದ ಶಿವಾನಂದ್ ಮತ್ತು ಚೌವಾಣ್ ಅವರ ಜತೆ ಸೇರಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ
ಇಲಾಖೆಗೆ ಸೇರಿದ ಕೌಶಲ ಭವನದ ರಸ್ತೆಯ ಬಳಿ ದಾಳಿ ನಡೆಸಿದಾಗ ಅಕ್ರಮ ಹಣ ಪತ್ತೆಯಾಯಿತು ಎಂದು ಎಸಿಬಿ ಮೂಲಗಳು ತಿಳಿಸಿವೆ.
ಆರೋಪಿಗಳು ಅಕ್ರಮ ಹಣ ಸಂಗ್ರಹಕ್ಕಾಗಿ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಹಣವನ್ನು ಯಾರಿಂದ, ಯಾವ ಉದ್ದೇಶಕ್ಕೆ ವಸೂಲಿ ಮಾಡಿದ್ದರು ಎಂಬ ವಿವರಗಳನ್ನು ಎಸಿಬಿ ನೀಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.