ADVERTISEMENT

ಮಲ್ಲೇಶ್ವರ ಬಾಂಬ್‌ ಸ್ಫೋಟ: ಆರೋಪಿ ಮೇಲೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಹಲ್ಲೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 7:11 IST
Last Updated 7 ಫೆಬ್ರುವರಿ 2023, 7:11 IST
   

ಬೆಂಗಳೂರು: ಮಲ್ಲೇಶ್ವರ ಬಾಂಬ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪತ್ರ ನೀಡಿದ್ದ ಆರೋಪಿ ಸೈಯದ್ ಅಲಿ ಮೇಲೆ ಸಹ ಆರೋಪಿಗಳು ಹಲ್ಲೆ ಮಾಡಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸೈಯದ್ ಅಲಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಅಧಿಕಾರಿಗಳು ದೂರು ನೀಡಿದ್ದಾರೆ. ವಿಚಾರಣಾಧೀನ ಕೈದಿಗಳಾದ ಕಿಚನ್ ಬುಹಾರಿ ಅಲಿಯಾಸ್ ಬುಗಾರಿ, ಜುಲ್ಫಿಕರ್ ಅಲಿ, ಶಿಹಾಬುದ್ದೀನ್ ಅಲಿಯಾಸ್ ಖಾಲಿದ್, ಅಹಮ್ಮದ್ ಬಾವಾ ಅಬೂಬಕರ್ ಹಾಗೂ ಬಿಲಾಲ್ ಅಹಮ್ಮದ್ ಅಲಿಯಾಸ್ ಇಮ್ರಾನ್ ಜಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಲ್ಲೇಶ್ವರ ಬಿಜೆಪಿ ಕಚೇರಿ ಎದುರು ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸೈಯದ್‌ ಅಲಿಯನ್ನು ಬಂಧಿಸಲಾಗಿತ್ತು. ಕಾರಾಗೃಹದಲ್ಲಿರುವ ಈತ, ನ್ಯಾಯಾಲಯಕ್ಕೆ ಇತ್ತೀಚೆಗೆ ತಪ್ಪೊಪ್ಪಿಗೆ ಪತ್ರ ನೀಡಿದ್ದ. ಇದು ಗೊತ್ತಾಗುತ್ತಿದ್ದಂತೆ ಸೈಯದ್ ಮೇಲೆ ಕೋಪಗೊಂಡಿದ್ದ ಆರೋಪಿಗಳು, 2022ರ ಡಿಸೆಂಬರ್ 16ರಂದು ಹಲ್ಲೆ ಮಾಡಿದ್ದರು. ವಿಷಯವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆಯೊಡ್ಡಿದ್ದರು.’

ADVERTISEMENT

‘ಹಲ್ಲೆ ಸಂಗತಿ ಇತ್ತೀಚೆಗಷ್ಟೇ ಜೈಲಿನ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಕೆಲ ಪುರಾವೆಗಳನ್ನು ಸಂಗ್ರಹಿಸಿ ದೂರು ನೀಡಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.