ADVERTISEMENT

ಬೆಂಗಳೂರು: ₹2.20 ಕೋಟಿ ನಗದಿನೊಂದಿಗೆ ಪರಾರಿಯಾಗಿದ್ದವನ ಬಂಧನ

ಸ್ನೇಹಿತನಿಗೇ ವಂಚಿಸಿ ಓಡಿಹೋಗಿದ್ದ ರಿಯಲ್ ಎಸ್ಟೇಟ್ ಮಧ್ಯವರ್ತಿ, ಸಹಚರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:24 IST
Last Updated 8 ಏಪ್ರಿಲ್ 2025, 15:24 IST
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಹಣ 
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಹಣ    

ಬೆಂಗಳೂರು: ಸ್ನೇಹಿತನ ಜಮೀನು ಮಾರಾಟದಿಂದ ಬಂದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ರಿಯಲ್ ಎಸ್ಟೇಟ್ ಮಧ್ಯವರ್ತಿ ಹಾಗೂ ಆತನ ಸಹಚರನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ ನಿವಾಸಿ ಆರ್.ಎಸ್.ಮಂಜುನಾಥ್ (43) ಹಾಗೂ ಜೆಸಿಬಿ ಚಾಲಕ ಕೃಷ್ಣಕುಮಾರ್(38) ಬಂಧಿತರು. 

ಆರೋಪಿಗಳಿಂದ ₹15 ಲಕ್ಷ ಮೌಲ್ಯದ ಕಾರು ಮತ್ತು ₹2.20 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಪಾಪಯ್ಯ ಗಾರ್ಡನ್‌ ನಿವಾಸಿ, ರಿಯಲ್‌ ಎಸ್ಟೇಟ್ ಉದ್ಯಮಿ ಸುಕುಮಾರ್‌ ಅವರಿಗೆ ಸೇರಿದ ₹2.20 ಕೋಟಿ ನಗದು ಮತ್ತು ಬಾಡಿಗೆಗೆ ಪಡೆದಿದ್ದ ಇನೊವಾ ಕಾರನ್ನು ಆರೋಪಿಗಳು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದರು. ಸುಕುಮಾರ್‌ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

‘ಸುಕುಮಾರ್ ಅವರು ನಾಲ್ಕು ಎಕರೆ ಜಮೀನನ್ನು ಮಾರಾಟ ಮಾಡಿದ್ದರು. ಖರೀದಿದಾರರಿಂದ ₹2.20 ಕೋಟಿ ಪಡೆದುಕೊಂಡಿದ್ದರು. ಹಣವನ್ನು ಮನೆಗೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಲು ಸ್ನೇಹಿತ ಮಂಜುನಾಥ್‌ ನೆರವು ಪಡೆದುಕೊಂಡಿದ್ದರು. ಈ ಹಿಂದೆ ಮಂಜುನಾಥ್‌ ತಮ್ಮ ಮನೆಯಲ್ಲೇ ಬಾಡಿಗೆಗೆ ಇದ್ದ ಕಾರಣಕ್ಕೆ ಸುಕುಮಾರ್‌ ಅವರ ಜತೆಗೆ ಆತ್ಮೀಯವಾಗಿದ್ದ. ಬಾಡಿಗೆಗೆ ಪಡೆದ ಕಾರನ್ನು ಆರೋಪಿ ಮಂಜುನಾಥ್ ಚಾಲನೆ ಮಾಡುತ್ತಿದ್ದ. ಮಾರ್ಗಮಧ್ಯದಲ್ಲಿ ಕಾರು ನಿಲುಗಡೆ ಮಾಡಿ ಒಂದು ಲಕ್ಷ ರೂಪಾಯಿ ಅನ್ನು ತಮ್ಮ ಖಾತೆಗೆ ಜಮೆ ಮಾಡಲು ಸುಕುಮಾರ್ ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಅದೇ ವೇಳೆ ಮಂಜುನಾಥ್ ಕಾರಿನಲ್ಲಿದ್ದ ₹2.20 ಕೋಟಿ ಸಮೇತ ಪರಾರಿಯಾಗಿದ್ದ. ಇದಕ್ಕೆ ಕೃಷ್ಣಕುಮಾರ್ ನೆರವು ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಮಂಡ್ಯದ ಕೆ.ಎಂ. ದೊಡ್ಡಿ, ಭಾರತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.