ಬೆಂಗಳೂರು: ನಗರದ ಲಾಡ್ಜ್ಗಳಲ್ಲಿ ವಾಸವಿದ್ದು ಕೊಠಡಿಯಲ್ಲಿರುತ್ತಿದ್ದ ಟಿ.ವಿ ಹಾಗೂ ಮೊಬೈಲ್ ಕದ್ದೊಯ್ಯುತ್ತಿದ್ದ ಆರೋಪದಡಿ ವಿಜಯ್ ಅಶೋಕ್ ಕಾಳೆ (32) ಎಂಬುವರನ್ನು ಬಂಧಿಸಲಾಗಿದೆ.
‘ಹೈದರಾಬಾದ್ ನಿವಾಸಿ ವಿಜಯ್, ಆಗಾಗ ಬೆಂಗಳೂರಿಗೆ ಬಂದು ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು. ಅವರನ್ನು ಬಂಧಿಸಿ ₹ 2.70 ಲಕ್ಷ ಮೌಲ್ಯದ 9 ಟಿ.ವಿ.ಗಳು ಹಾಗೂ 4 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮೆಜೆಸ್ಟಿಕ್ ಬಳಿಯ ಲಾಡ್ಜ್ವೊಂದರಲ್ಲಿ ಇತ್ತೀಚೆಗೆ ವಾಸವಿದ್ದ ಆರೋಪಿ, ತಮ್ಮ ದೊಡ್ಡ ಬ್ಯಾಗ್ನಲ್ಲಿ ಟಿ.ವಿ. ಕದ್ದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಲಾಡ್ಜ್ ಮೇಲ್ವಿಚಾರಕ ದೂರು ನೀಡಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.
‘ನಗರದ ಹಲವು ಲಾಡ್ಜ್ಗಳಲ್ಲಿ ಆರೋಪಿ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಲಾಡ್ಜ್ನ ಅಕ್ಕ–ಪಕ್ಕದ ಕೊಠಡಿಯಲ್ಲಿರುತ್ತಿದ್ದ ಗ್ರಾಹಕರ ಮೊಬೈಲ್ಗಳನ್ನೂ ಆರೋಪಿ ಕದ್ದಿದ್ದಾರೆ. ಆದರೆ, ಕೆಲವರು ದೂರು ನೀಡಿಲ್ಲ. ಆರೋಪಿ ನೀಡಿರುವ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.