ADVERTISEMENT

ಥಣಿಸಂದ್ರ ವಾರ್ಡ್‌ನಲ್ಲಿ ಮೇಯರ್ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:20 IST
Last Updated 25 ಮೇ 2019, 19:20 IST
ಥಣಿಸಂದ್ರ ವಾರ್ಡ್‌ನ ರಾಜಕಾಲುವೆಗಳಲ್ಲಿ ನಡೆಯುತ್ತಿರುವ ರೋಬೋಟಿಕ್‌ ಯಂತ್ರದ ಮೂಲಕ ಹೂಳೆತ್ತುವ ಕಾಮಗಾರಿ
ಥಣಿಸಂದ್ರ ವಾರ್ಡ್‌ನ ರಾಜಕಾಲುವೆಗಳಲ್ಲಿ ನಡೆಯುತ್ತಿರುವ ರೋಬೋಟಿಕ್‌ ಯಂತ್ರದ ಮೂಲಕ ಹೂಳೆತ್ತುವ ಕಾಮಗಾರಿ   

ಬೆಂಗಳೂರು: ಯಲಹಂಕ ವಲಯದ ಥಣಿಸಂದ್ರ ವಾರ್ಡ್‌ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ ಎಂಬ ಟೀಕೆಗಳು ಜಾಲತಾಣಗಳಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮೇಯರ್ ಗಂಗಾಂಬಿಕೆ ಶನಿವಾರ ಪರಿಶೀಲನೆ ನಡೆಸಿದರು.

ವಾರ್ಡ್‌ 110 ಹಳ್ಳಿಗಳ ವ್ಯಾಪ್ತಿಗೆ ಬರುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಲಹಂಕ ವಲಯದ ವ್ಯಾಪ್ತಿಗೆ ಬರುವ ವಾರ್ಡ್‍ಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿದ್ದರು. ಇಲ್ಲಿಯವರೆಗೂ ಏಕೆ ಅಭಿವೃದ್ಧಿ ಹೊಂದಿಲ್ಲ ಎಂದು ಅಧಿಕಾರಿಗಳನ್ನು ನೆಟ್ಟಿಗರು ತರಾಟೆ ತೆಗೆದುಕೊಂಡರು.

ಇದರಿಂದಾಗಿ ಮೇಯರ್‌, ಉಪಮೇಯರ್ ಭದ್ರೇಗೌಡ ಮತ್ತು ಅಧಿಕಾರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ಕೊಟ್ಟರು. ₹80 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಕಾವೇರಿ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ 4 ಸಾವಿರ ನಿವಾಸಿಗಳಿದ್ದಾರೆ. ಆದರೆ, ಕೇವಲ 120 ಮಂದಿಗೆ ಮಾತ್ರ ನೀರಿನ ಸಂಪರ್ಕ ಕಲ್ಪಿಸಿದ್ದಾರೆ. ಈ ಕೂಡಲೇ ಉಳಿದ ನಿವಾಸಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಮೇಯರ್‌ ತಾಕೀತು ಮಾಡಿದರು.

ADVERTISEMENT

ಕಾಫಿಬೋರ್ಡ್ ಲೇಔಟ್, ಭುವನೇಶ್ವರಿನಗರ, ಭಾರತ್‍ನಗರ, ಫಾತಿಮಾ ಲೇಔಟ್, ಅಮರಜ್ಯೋತಿ ಲೇಔಟ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಜಲಮಂಡಳಿಯಿಂದ ಕಾಮಗಾರಿಗಳು ಪೂರ್ಣಗೊಂಡಿವೆ.‌ ಕಾಮಗಾರಿಗಳಿಗಾಗಿ ಅಗೆದ ರಸ್ತೆಗಳ ಪುನರ್‌ನಿರ್ಮಾಣ ಕಾರ್ಯ ಬಾಕಿ ಉಳಿದಿದೆ. ಎಂ.ಎಸ್‍.ಆರ್ ಬಡಾವಣೆಯಲ್ಲಿ ರೊಬೋಟಿಕ್ ಯಂತ್ರಗಳ ಮೂಲಕ ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿಯನ್ನೂ ತಪಾಸಣೆ ನಡೆಸಿದರು. ಮಳೆಗಾಲ ಈಗಾಗಲೇ ಆರಂಭವಾಗಿದ್ದು, ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

**

ಎಲ್ಲ ಕಾಮಗಾರಿಗಳ ಅಭಿವೃದ್ಧಿ ಕಾರ್ಯ ಚುರುಕಾಗಿದ್ದು, ಒಂದೆರಡು ವರ್ಷಗಳಲ್ಲಿ ಮಾದರಿ ವಾರ್ಡ್ ಆಗಿ ಪರಿವರ್ತನೆಯಾಗಲಿದೆ
- ಗಂಗಾಂಬಿಕೆ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.