ADVERTISEMENT

ಕಬ್ಬನ್‌ ಪಾರ್ಕ್‌: ಧ್ಯಾನಕ್ಕಾಗಿ ‘ಪವಿತ್ರವನ’

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 19:58 IST
Last Updated 17 ಜೂನ್ 2019, 19:58 IST
ಪವಿತ್ರ ವನಕ್ಕೆ ಮೀಸಲಿಟ್ಟ ಜಾಗ
ಪವಿತ್ರ ವನಕ್ಕೆ ಮೀಸಲಿಟ್ಟ ಜಾಗ   

ಬೆಂಗಳೂರು:ಪ್ರಶಾಂತವಾದ ವಾತಾವರಣದಲ್ಲಿ ಧ್ಯಾನ ಮಾಡಬೇಕು ಎಂದು ಬಯಸುವವರಿಗೆ ಕಬ್ಬನ್‌ ಪಾರ್ಕ್‌ನಲ್ಲಿ ಶೀಘ್ರದಲ್ಲೇ ‘ಪವಿತ್ರವನ’ ನಿರ್ಮಾಣ ಮಾಡಲಾಗುತ್ತಿದೆ.

ಧ್ಯಾನಕ್ಕೆ ಪೂರಕವಾದ ವಾತಾವರಣವನ್ನು ಪಾರ್ಕ್‌ನಲ್ಲಿ ಸೃಷ್ಟಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಇಲಾಖೆಯ ಕಚೇರಿಯ ನರ್ಸರಿ ಬಳಿಯ ಒಂದು ಎಕರೆಯಲ್ಲಿ ‘ಪವಿತ್ರವನ’ ತಲೆ ಎತ್ತಲಿದೆ.

200 ಬಗೆಯ 350ರಿಂದ 400 ಔಷಧಿ ಸಸ್ಯಗಳನ್ನು ಈ ಪ್ರದೇಶದಲ್ಲಿ ಬೆಳೆಸಲಾಗುತ್ತದೆ.

ADVERTISEMENT

ಪರಿಸರ ತಜ್ಞ ಅ.ನ. ಯಲ್ಲಪ್ಪ ರೆಡ್ಡಿ ಈ ಥೀಮ್‌ ಪಾರ್ಕ್‌ ನೀಲನಕ್ಷೆಯನ್ನು ವಿನ್ಯಾಸಗೊಳಿಸಿದ್ದು, ಇಲ್ಲಿ ನೆಡಲು ಉದ್ದೇಶಿಸಿರುವ ಸಸಿಗಳನ್ನೂ ಅವರೇ ಆಯ್ಕೆ ಮಾಡಿದ್ದಾರೆ.

‘ಈಗ ಗುಂಡಿಗಳನ್ನು ತೋಡಲು ಪ್ರಾರಂಭಿಸಿದ್ದು, ಮುಂದಿನ ವಾರದ ವೇಳೆಗೆ ಸಸಿಗಳನ್ನು ನೆಡಲಿದ್ದೇವೆ.

ಔಷಧೀಯ ಗುಣಗಳನ್ನು ಹೊಂದಿರುವ ಈ ಸಸ್ಯಗಳನ್ನು ಬಿಳಿಗಿರಿರಂಗನ ಬೆಟ್ಟ ಮತ್ತು ರಾಜ್ಯದ ಇತರೆ ಕಡೆಗಳಿಂದ ತರಿಸಲಾಗಿದೆ.

ಈ ಉದ್ಯಾನವನ್ನು ನಿರ್ವಹಣೆ ಮಾಡುವುದಕ್ಕೆ ಮಾತ್ರ ಇಲಾಖೆಯ ಪಾತ್ರ ಸೀಮಿತವಾಗಿದೆ’ ಎಂದು ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು.

ವಿವಿಧ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಈ ಯೋಜನೆಗೆ ಹಣ ವಿನಿಯೋಗಿಸುತ್ತಿವೆ. ಸಸಿಗಳನ್ನು ಅವರೇ ತರುತ್ತಿದ್ದಾರೆ.

ನಾಗಲಿಂಗ ಪುಷ್ಪ, ನಾಗಸಂಪಿಗೆ, ಬ್ರಹ್ಮವೃಕ್ಷ, ಸೀತಾ ಅಶೋಕ, ಬಿಲ್ವಪತ್ರೆ, ಅಶೋಕ ವೃಕ್ಷ, ಕೆಂಡಸಂಪಿಗೆ ಮತ್ತು ಬನ್ನಿ ಸಸ್ಯಗಳನ್ನು ಇಲ್ಲಿ ನೆಡಲಾಗುತ್ತದೆ ಎಂದು ಮುರಗೋಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.