ADVERTISEMENT

ಸಿಗ್ನಲಿಂಗ್‌ ಸಮಸ್ಯೆ: ಮೆಟ್ರೊ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:28 IST
Last Updated 22 ಸೆಪ್ಟೆಂಬರ್ 2019, 19:28 IST
   

ಬೆಂಗಳೂರು: ಸಿಗ್ನಲಿಂಗ್‌ ಸಮಸ್ಯೆ ಕಂಡು ಬಂದಿದ್ದರಿಂದ ‘ನಮ್ಮ ಮೆಟ್ರೊ’ ರೈಲು ಸಂಚಾರದಲ್ಲಿ ಭಾನುವಾರ ಸುಮಾರು ಎರಡು ತಾಸು ವ್ಯತ್ಯಯ ಉಂಟಾಯಿತು. ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಯಲಚೇನಹಳ್ಳಿ-ನಾಗಸಂದ್ರ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿತು. ಪರಿಣಾಮ ಮಧ್ಯಾಹ್ನ 12.06ರ ಸುಮಾರಿಗೆ 1.52ರ ವರೆಗೆ ಯಲಚೇನಹಳ್ಳಿ-ಆರ್.ವಿ. ರಸ್ತೆ ನಡುವೆ ಸಂಚಾರ ಸ್ಥಗಿತಗೊಂಡಿತು. ಆ ಮಾರ್ಗದಲ್ಲಿ ಪ್ರಯಾಣಿಸುವ ನೂರಾರು ಜನರಿಗೆ ಇದರ ಬಿಸಿ ತಟ್ಟಿತು. ಆರ್.ವಿ. ರಸ್ತೆ, ಬನಶಂಕರಿ, ಜೆ.ಪಿ. ನಗರ ಮತ್ತು ಯಲಚೇನಹಳ್ಳಿ ನಿಲ್ದಾಣಗಳಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು. ಈ ಅವಧಿಯಲ್ಲಿ ಆರ್.ವಿ. ರಸ್ತೆಯಿಂದ ನಾಗಸಂದ್ರದವರೆಗೆ ಮಾತ್ರ ಮೆಟ್ರೊ ಸೇವೆ ಲಭ್ಯವಿತ್ತು.

ಪ್ರಯಾಣಿಕರು ಆರ್.ವಿ ರಸ್ತೆಯಲ್ಲಿ ಇಳಿದು, ಬಸ್ ಅಥವಾ ಆಟೊ ಮೂಲಕ ಮನೆಗೆ ತೆರಳಿದರು. ಅದೇ ರೀತಿ, ಬಸ್ ಅಥವಾ ಆಟೊ ಅಥವಾ ಕ್ಯಾಬ್‍ನಲ್ಲಿ ಆರ್.ವಿ. ರಸ್ತೆಗೆ ಬಂದು, ಅಲ್ಲಿಂದ ಮೆಟ್ರೊದಲ್ಲಿ ತೆರಳಿದರು.

ADVERTISEMENT

‘ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾ
ಯಿತು. ನಂತರ ದೋಷ ಪರಿಹರಿಸಿದ್ದು, ಮಧ್ಯಾಹ್ನ 1.52ರ ಸುಮಾರಿಗೆ ಸೇವೆ ಯಥಾಸ್ಥಿತಿಗೆ ಮರಳಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.