ಬೆಂಗಳೂರು: ಆರು ಬೋಗಿಯ ಮೂರನೇ ರೈಲು ಗುರುವಾರ ನೇರಳ ಮಾರ್ಗದಲ್ಲಿ ಸಂಚಾರ ಆರಂಭಿಸಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಬೆಳಿಗ್ಗೆ 11.34ಕ್ಕೆ ವಿಧಾನಸೌಧ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಮಟ್ರೊ ನಿಲ್ದಾಣದಲ್ಲಿ ಈ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಆರು ಬೋಗಿಯ ಎರಡು ರೈಲುಗಳು ಡಿಸೆಂಬರ್ ತಿಂಗಳಿನಿಂದ ಸಂಚಾರ ಆರಂಭಿಸಲಿವೆ. ಇದರಲ್ಲಿ ಒಂದು ರೈಲನ್ನು ಉತ್ತರ–ದಕ್ಷಿಣ ಕಾರಿಡಾರ್ನಲ್ಲಿ (ಹಸಿರು ಮಾರ್ಗ) ಓಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಚಿಂತನೆ ನಡೆಸಿದೆ.
‘ಹಸಿರು ಮಾರ್ಗಕ್ಕೆ ಹೋಲಿಸಿದರೆ ನೇರಳೆ ಮಾರ್ಗದಲ್ಲಿ (ಪೂರ್ವ–ಪಶ್ಚಿಮ ಕಾರಿಡಾರ್) ಪ್ರಯಾಣಿಕರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಈ ದಟ್ಟಣೆ ಕಡಿಮೆ ಮಾಡುವುದು ನಮ್ಮ ಆದ್ಯತೆ. ಹಾಗಾಗಿ ಡಿಸೆಂಬರ್ನಲ್ಲಿ ಮೊದಲ ಎರಡು 6 ಬೋಗಿಯ ರೈಲುಗಳನ್ನು ನೇರಳೆ ಮಾರ್ಗದಲ್ಲಿ ಓಡಿಸುತ್ತೇವೆ. ಡಿಸೆಂಬರ್ ಅಂತ್ಯದಲ್ಲಿ ಹಸಿರು ಮಾರ್ಗದಲ್ಲೂ ಆರು ಬೋಗಿಯ ರೈಲು ಸಂಚಾರ ಆರಂಭಿಸಲಾಗುವುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದರು.
***
ಏನಿದರ ವಿಶೇಷ?
* ಮೂರು ಬೋಗಿಯ ರೈಲಿಗೆ ಹೋಲಿಸಿದರೆ ಇದು ಶೇ 15ರಷ್ಟು ಕಡಿಮೆ ಇಂಧನ ಉಳಿತಾಯ ಮಾಡಲಿದೆ
* ವಾತಾವರಣದ ಉಷ್ಣಾಂಶಕ್ಕೆ ಅನುಗುಣವಾಗಿ ಬೋಗಿಗಳಲ್ಲಿನ ಹವಾನಿಯಂತ್ರಣ ವ್ಯವಸ್ಥೆಯು ಸ್ವಯಂಬದಲಾವಣೆ ಹೊಂದಲಿದೆ
* ರೈಲಿನ ಕುರಿತ ದತ್ತಾಂಶವನ್ನು ಕಚೇರಿಯಿಂದಲೇ ಪಡೆಯಬಹುದು
* ರೈಲು ಬ್ರೇಕ್ ವ್ಯವಸ್ಥೆಗೆ ಡೇಟಾ ಲಾಗರ್ ಅಳವಡಿಕೆ
* ಜಾಹೀರಾತು ಪ್ರದರ್ಶನಕ್ಕೆ ಸ್ಪ್ಲಿಟ್ ಸ್ಕ್ರೀನ್ ಸೌಲಭ್ಯ
* ವೋಲ್ಟೇಜ್ ವ್ಯತ್ಯಯವನ್ನು ದೂರದಿಂದಲೇ ನಿಯಂತ್ರಣ ಮಾಡುವ ಅತ್ಯಾಧುನಿಕ ರೈಲು ನಿರ್ವಹಣಾ ವ್ಯವಸ್ಥೆ
ಇದನ್ನೂ ಓದಿ...
ಆರು ಬೋಗಿಗಳೊಂದಿಗೆ ಹಳಿಗಿಳಿದ ಸುಂದರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.