ಬೆಂಗಳೂರು: ಶೇಷಾದ್ರಿಪುರದಲ್ಲಿನ ಜೆಡಿಎಸ್ ಕಚೇರಿ ಬಳಿ ಮೆಟ್ರೊ ರೈಲು ಮಾರ್ಗದ ಒಂದು ಬದಿಯ ಗೋಡೆ ಮತ್ತು ಜಾಲರಿ ಕುಸಿದು ಬಿದ್ದಿರುವ ಘಟನೆ ಬಗ್ಗೆ ಬಿಎಂಆರ್ಸಿಎಲ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್ಸಿಎಲ್ ಅಧಿಕಾರಿಗಳು, ಪರಿಸ್ಥಿತಿ ಅವಲೋಕಿಸಿದರು. ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್ನ ಒಂದು ಭಾಗವನ್ನು ತೆರವುಗೊಳಿಸಲಾಗಿದೆ. ಮೆಟ್ರೊ ರೈಲು ಕಾಮಗಾರಿ ಆರಂಭವಾದಾಗ 12 ವರ್ಷಗಳ ಹಿಂದೆ ನಿರ್ಮಿಸಿದ್ದ ಗೋಡೆ ಕುಸಿದಿದೆ. ‘ಮುಖ್ಯವಾದ ತಡೆಗೋಡೆ ಹಾಗೆಯೇ ಉಳಿದಿದೆ. ಮೆಟ್ರೊ ರೈಲಗಳ ಮೇಲೆ ಕಲ್ಲು ತೂರುವ ಘಟನೆಗಳು ಸಂಭವಿಸಿದ ಬಳಿಕ ಕಾಂಪೌಂಡ್ಗೆ ಜಾಲರಿ ಅಳವಡಿಸಲಾಗಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಳಪೆ ಕಾಮಗಾರಿಯಿಂದ ಗೋಡೆ ಕುಸಿದಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು ಎಂದರು. ರಸ್ತೆ ಬದಿ ನಿಂತಿದ್ದ ವಾಹನಗಳ ಮೇಲೆ ಕಾಂಪೌಂಡ್ ಮತ್ತು ಜಾಲರಿ ಬುಧವಾರ ಕುಸಿದು ಬಿದ್ದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.