ನೆಲಮಂಗಲಕ್ಕೆ 45 ಆಮ್ಲಜನಕ ಸಿಲಿಂಡರ್ ಪೂರೈಕೆ: ಸಚಿವ ಆರ್. ಅಶೋಕ
ಪ್ರಜಾವಾಣಿ ವಾರ್ತೆ Published 10 ಮೇ 2021, 19:30 IST Last Updated 10 ಮೇ 2021, 19:30 IST ಸಚಿವ ಆರ್. ಅಶೋಕ ಅವರು ನೆಲಮಂಗಲ ಸಾರ್ವಜನಿಕ ಆಸ್ಪತ್ರೆ ಪರಿಶೀಲಿಸಿದರು. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಇದ್ದಾರೆ.
ನೆಲಮಂಗಲ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗು ವಿಶ್ವೇಶ್ವರಪುರ ಟಿಬೇಟಿಯನ್ ಕೌಶಲ ಕೇಂದ್ರದಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರಗಳ ಪರಿಶೀಲಿಸಿದ ಕಂದಾಯ ಸಚಿವ ಆರ್. ಅಶೋಕ, ಸೋಂಕಿತ ರೋಗಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಅಮೆರಿಕದಿಂದ ಮಂಗಳವಾರ ಆಮ್ಲಜನಕ ಬರುತ್ತಿದ್ದು, 45 ಸಿಲಿಂಡರ್ ಗಳನ್ನು ನೆಲಮಂಗಲಕ್ಕೆ ಕಳುಹಿಸಿಕೊಡಲಾಗುವುದು. ಶೀಘ್ರದಲ್ಲಿ 100 ಸಿಲಿಂಡರ್ ಒದಗಿಸಲಾಗುವುದು. ರಾಜ್ಯದ ಎಲ್ಲ ತಾಲ್ಲೂಕಿನಲ್ಲೂ 100 ಆಮ್ಮಜನಕ ಹಾಸಿಗೆ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
‘ಬೇಗೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ದೂರುಗಳು ಬಂದಿದ್ದು, ವೈದ್ಯರು ಮತ್ತು ಸಿಬ್ಬಂದಿ ಗೈರಾಗಿರುವುದು ಸಮಸ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ವೈದ್ಯರಿಗೆ ನೋಟಿಸ್ ನೀಡಲಾಗುವುದು. ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಮಾನ್ಯತೆ ರದ್ದುಗೊಳಿಸಿ, ಸೋಂಕಿತ ರೋಗಿಗಳಿಗೆ ಬೇರೆಡೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು’ ಎಂದರು.
‘ಪರೀಕ್ಷೆ ಮಾಡಿಸಿಕೊಳ್ಳದಿರುವುದು, ಸೋಂಕು ಇರುವವರು ಫೋನ್ ಆಫ್ ಮಾಡಿಕೊಂಡಿರುವುದು, ಜನ ಆಡಿಕೊಳ್ಳುತ್ತಾರೆ ಎಂದು ಚಿಕಿತ್ಸೆಗೆ ಬರುತ್ತಿಲ್ಲ, ಇಂತಹವರಿಂದ ಸೋಂಕು ಹರಡುವುದು ಹೆಚ್ಚುತ್ತಿದೆ. ಸಮಸ್ಯೆ ತೀವ್ರವಾದಾಗ ಚಿಕಿತ್ಸೆಗೆ ಬರುತ್ತಿದ್ದಾರೆ. ಆಮ್ಲಜನಕ ಹಾಸಿಗೆ ಅವಶ್ಯಕತೆ ಇಲ್ಲದವರು ಅವಶ್ಯವಿರುವವರಿಗೆ ಬಿಟ್ಟುಕೊಡಬೇಕು. ಸುಮ್ಮನೆ ಆಸ್ಪತ್ರೆಗಳನ್ನು ಸುತ್ತುವ ಬದಲು ಆರೈಕೆ ಕೇಂದ್ರದಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಬೇರೆಡೆಗೆ ವರ್ಗಾಯಿಸಲಾಗುವುದು, ಸಮಸ್ಯೆ ಸೃಷ್ಟಿಸುವುದು ಬೇಡ’ ಎಂದರು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಮಂಜುನಾಥ್, ಆರೋಗ್ಯಾಧಿಕಾರಿಗಳಾದ ಹರೀಶ್, ನರಸಿಂಹಯ್ಯ ಇದ್ದರು.