ಬೆಂಗಳೂರು: ಜಾತಿನಿಂದನೆ ಮತ್ತು ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಂಧಿಸಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಎರಡು ದಿನ ಪೊಲೀಸರ ವಶಕ್ಕೆ ಒಪ್ಪಿಸಿ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಗುತ್ತಿಗೆದಾರ ಚೆಲುವರಾಜು ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ನೀಡಿದ್ದ ದೂರುಗಳನ್ನು ಆಧರಿಸಿ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ಆಂಧ್ರ ಪ್ರದೇಶದ ಚಿತ್ತೂರಿನತ್ತ ತೆರಳುತ್ತಿದ್ದ ಅವರನ್ನು ಕೋಲಾರ ಜಿಲ್ಲೆಯ ಗಡಿಭಾಗದ ನಂಗಲಿಯಲ್ಲಿ ಶನಿವಾರ ಸಂಜೆ ವೈಯಾಲಿಕಾವಲ್ ಠಾಣೆ ಮತ್ತು ಕೋಲಾರ ಜಿಲ್ಲಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದು, ಬಂಧಿಸಲಾಗಿತ್ತು.
ಕೋಲಾರದಿಂದ ಪೊಲೀಸ್ ವಾಹನದಲ್ಲಿ ಕರೆತಂದ ಮುನಿರತ್ನ ಅವರನ್ನು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಬಳಿಕ ಕೆಲಕಾಲ ವಿಚಾರಣೆ ನಡೆಸಲಾಯಿತು. ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಎದುರು ಆರೋಪಿಯನ್ನು ಭಾನುವಾರ ನಸುಕಿನ ಜಾವ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಒಂದು ವಾರ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಮುನಿರತ್ನ ಅವರನ್ನು ಎರಡು ದಿನ ಪೊಲೀಸರ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.
ಅಶೋಕನಗರ ಠಾಣೆಯಲ್ಲಿ ವಿಚಾರಣೆ:
ಮುನಿರತ್ನ ಅವರನ್ನು ಬಂಧಿಸಿರುವ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ವೈಯಾಲಿಕಾವಲ್ ಠಾಣೆ ಎದುರು ಸೇರಿದ್ದ ಅವರ ಬೆಂಬಲಿಗರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಠಾಣೆಗೆ ನುಗ್ಗಲೂ ಪ್ರಯತ್ನಿಸಿದ್ದರು. ಭದ್ರತಾ ದೃಷ್ಟಿಯಿಂದ ಮುನಿರತ್ನ ಅವರನ್ನು ಅಶೋಕನಗರ ಠಾಣೆಗೆ ಸ್ಥಳಾಂತರಿಸಲಾಗಿತ್ತು. ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಪ್ರಕಾಶ್ ನೇತೃತ್ವದ ತನಿಖಾ ತಂಡ ಅಲ್ಲಿಯೇ ಅವರನ್ನು ಒಂದೂವರೆ ಗಂಟೆ ವಿಚಾರಣೆ ನಡೆಸಿತು.
ಮುನಿರತ್ನ ಅವರನ್ನು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಇರಿಸಿರುವ ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿಗೂ ನೂರಾರು ಮಂದಿ ಬೆಂಬಲಿಗರು ಬಂದರು. ಠಾಣೆಯ ಎದುರೇ ಘೋಷಣೆ ಕೂಗಿದರು. ಕೆಲವರು ಠಾಣೆಗೆ ನುಗ್ಗಲು ಯತ್ನಿಸಿದರು. ಕಬ್ಬಿಣದ ಗೇಟ್ ಹಾಕಿ ಬಂದ್ ಮಾಡಿದ ಪೊಲೀಸರು, ತನಿಖಾ ಪ್ರಕ್ರಿಯೆಯನ್ನು ಮುಂದುವರಿಸಿದರು.
‘ನಾನು ಯಾವುದೇ ತಪ್ಪು ಮಾಡಿಲ್ಲ. ಈ ಎಲ್ಲವೂ ನನ್ನ ವಿರುದ್ಧದ ಷಡ್ಯಂತ್ರ’ ಎಂದು ಮುನಿರತ್ನ ಉತ್ತರಿಸಿದ್ದಾರೆ. ಬಹುತೇಕ ಪ್ರಶ್ನೆಗಳಿಗೆ ಉತ್ತರಿಸದೇ, ಮೌನವಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಧ್ವನಿ ಮಾದರಿ ಪರೀಕ್ಷೆಗೆ:
ಚೆಲುವರಾಜು ಜತೆಗಿನ ಮಾತುಕತೆಯಲ್ಲಿ ಮುನಿರತ್ನ ಅವರು ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರನ್ನು ಜಾತಿ ಆಧಾರದಲ್ಲಿ ನಿಂದಿಸಿದ್ದಾರೆ ಎನ್ನಲಾದ ಆಡಿಯೊ ತುಣುಕನ್ನು ದೂರಿನ ಜತೆ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಸಲ್ಲಿಸಲಾಗಿತ್ತು. ತಮ್ಮನ್ನೇ ಉದ್ದೇಶಿಸಿ ಶಾಸಕರು ಜಾತಿನಿಂದನೆ ಮಾಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್ ದೂರು ನೀಡಿದ್ದರು.
‘ಆಡಿಯೊ ತುಣುಕನ್ನು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಪರೀಕ್ಷೆಗೆ ಕಳುಹಿಸಲಾಗಿದೆ. ಮುನಿರತ್ನ ಮತ್ತು ಚೆಲುವರಾಜು ಅವರ ಧ್ವನಿಗಳ ಮಾದರಿಗಳನ್ನೂ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಕಚೇರಿಯಲ್ಲಿ ಮಹಜರು:
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಮುನಿರತ್ನ ಅವರ ಅಂಗರಕ್ಷಕ ವಿಜಯ್ ಕುಮಾರ್, ಆಪ್ತ ಸಹಾಯಕ ಅಭಿಷೇಕ್ ಹಾಗೂ ಆಪ್ತ ವಸಂತ್ ಕುಮಾರ್ ಅವರನ್ನು ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ದೂರು ನೀಡಿದ್ದ ಚೆಲುವರಾಜು ಅವರನ್ನು ಶಾಸಕರ ಕಚೇರಿಗೆ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದರು. ಅವರ ಹೇಳಿಕೆಯನ್ನೂ ದಾಖಲಿಸಿಕೊಂಡರು.
‘ಚೆಲುವರಾಜು ಹಾಗೂ ವೇಲು ನಾಯ್ಕರ್ ಅವರ ದೂರಿಗೆ ಸಾಕ್ಷಿಗಳು ಇಲ್ಲ. ದೂರು ಕೊಟ್ಟವರ ವಿರುದ್ಧ ಪ್ರತಿದೂರು ನೀಡಲಾಗಿದೆ. ಹೈಕೋರ್ಟ್ಗೆ ಮೊರೆ ಹೋಗಲಾಗುವುದು. ಸತ್ಯಕ್ಕೆ ಜಯ ಸಿಗಲಿದೆ’ ಎಂದು ಮುನಿರತ್ನ ಪರ ವಕೀಲ ಸದಾನಂದಶಾಸ್ತ್ರಿ ಹೇಳಿದ್ದಾರೆ.
ವಿಚಾರಣೆಗೆ ಕರೆದಿದ್ದರೆ ಹಾಜರಾಗುತ್ತಿದ್ದೆ..
‘ನಾನು ತಿರುಪತಿಗೆ ಹೊರಟ್ಟಿದ್ದೆ. ನನ್ನ ಮನೆ ಪಕ್ಕದಲ್ಲಿಯೇ ಪೊಲೀಸ್ ಠಾಣೆ ಇದೆ. ವಿಚಾರಣೆಗೆ ಕರೆದಿದ್ದರೆ ಹಾಜರಾಗುತ್ತಿದ್ದೆ. ವಿಚಾರಣೆ ನಡೆಸದೆ ರಾಜಕೀಯ ಪ್ರಭಾವದಿಂದ ಪೊಲೀಸರು ಏಕಾಏಕಿ ನನ್ನನ್ನು ಬಂಧಿಸಿದ್ದಾರೆ. ನನ್ನ ವಿರುದ್ಧ ಗುತ್ತಿಗೆದಾರ ಸುಳ್ಳು ಆರೋಪ ಮಾಡಿದ್ದಾರೆ. ನಾನು ತಪ್ಪು ಮಾಡಿಲ್ಲ. ನನಗೆ ಹೃದಯ ಸಂಬಂಧಿ ಹಾಗೂ ಹರ್ನಿಯಾ ಸಮಸ್ಯೆ ಇದೆ’ ಎಂದು ನ್ಯಾಯಾಧೀಶರ ಎದುರು ಮುನಿರತ್ನ ಅಳಲು ತೋಡಿಕೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಮುನಿರತ್ನ ಅವರ ಆರೋಗ್ಯ ತಪಾಸಣೆಯನ್ನು ನಿತ್ಯ ಮಾಡಿಸಬೇಕು’ ಎಂದು ನ್ಯಾಯಾಧೀಶರು ಆದೇಶಿಸಿದರು ಎಂದು ಹೇಳಿವೆ.
ಮುನಿರತ್ನ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಶಾಸಕ ಮುನಿರತ್ನ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೌಮ್ಯಾ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ನ ಕಾರ್ಯಕರ್ತೆಯರು ಕೆಪಿಸಿಸಿ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. ‘30 ಪರ್ಸೆಂಟ್ ಮುನಿರತ್ನ’ ‘ಮನಿರತ್ನ’ ಎಂಬ ಪೋಸ್ಟರ್ಗಳನ್ನು ಪ್ರದರ್ಶಿಸಿದ ಕಾರ್ಯಕರ್ತೆಯರು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ‘ಮುನಿರತ್ನ ಅವರು ದಲಿತ ಶೋಷಿತ ಹಿಂದುಳಿದ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಶಾಸಕರಾಗಲಿ ಅಥವಾ ಪಂಚಾಯಿತಿ ಸದಸ್ಯರೇ ಆಗಿರಲಿ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಈ ಪ್ರಕರಣದ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಸೌಮ್ಯಾ ರೆಡ್ಡಿ ಹೇಳಿದರು.
ಒಕ್ಕಲಿಗ ಸಂಘದಿಂದ ಖಂಡನೆ
ಗುತ್ತಿಗೆದಾರನ ಜತೆ ಮುನಿರತ್ನ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯಲ್ಲಿ ಆಕ್ಷೇಪಾರ್ಹ ಪದ ಬಳಸಿರುವುದನ್ನು ರಾಜ್ಯ ಒಕ್ಕಲಿಗರ ಸಂಘ ಖಂಡಿಸಿದೆ. ‘ಚುನಾಯಿತ ಪ್ರತಿನಿಧಿಗಳು ಯಾರೇ ಆದರೂ ಇದು ತಲೆ ತಗ್ಗಿಸುವಂತಹ ವಿಚಾರವಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.