ಬೆಂಗಳೂರು: ‘ನಾಡಪ್ರಭು ಕೆಂಪೇಗೌಡರು ಪ್ರೀತಿಯ ಸಾಮ್ರಾಜ್ಯವನ್ನು ಕಟ್ಟುವ ಮೂಲಕ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟಿದ್ದರು’ ಎಂದು ಶಾಸಕ ಆರ್.ಅಶೋಕ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಭಾನುವಾರ ರಾಜ್ಯ ಒಕ್ಕಲಿಗರ ಜಾಗೃತಿ ಸಂಘ ಆಯೋಜಿಸಿದ್ದ ಒಕ್ಕಲಿಗ ರತ್ನ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೆಂಪೇಗೌಡರು ಬೇರೆ–ಬೇರೆ ಸಮುದಾಯಗಳಿಗೆ ಬೆಂಗಳೂರಿನಲ್ಲಿ ನೆಲೆಯನ್ನು ಕಲ್ಪಿಸಿದ್ದರು. ಕೆಲಸವನ್ನೂ ದೊರಕಿಸಿಕೊಟ್ಟಿದ್ದರು’ ಎಂದರು.
‘ಕೆಆರ್ಎಸ್ ನಿರ್ಮಿಸಿದ್ದಕ್ಕಾಗಿ ಮಂಡ್ಯದ ಪ್ರತಿ ಮನೆಯಲ್ಲೂಸರ್.ಎಂವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಗಳನ್ನು ಇಡಲಾಗಿದೆ. ಆದರೆ, ಬೆಂಗಳೂರಿಗರ ಮನೆಯಲ್ಲಿ ಈ ನಗರದ ನಿರ್ಮಾತೃ ಕೆಂಪೇಗೌಡರ ಭಾವಚಿತ್ರ ನೋಡಲು ಸಿಗುವುದಿಲ್ಲ. ಅವರ ಪುತ್ಥಳಿ ಸ್ಥಾಪಿಸುವುದಕ್ಕೂ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ’ ಎಂದರು.
‘ಒಡೆದು ಹೋಗಿದ್ದ ನಮ್ಮ ಸಮಾಜವನ್ನು ಬಾಲಗಂಗಾಧರನಾಥ ಸ್ವಾಮೀಜಿ ಒಗ್ಗೂಡಿಸಿದ್ದರು. ಜಾತಿ ಗಣತಿ ವರದಿ ಬಿಡುಗಡೆಯಾದರೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ನಮ್ಮ ಜನಾಂಗ 8ನೇ ಸ್ಥಾನದಲ್ಲಿರುತ್ತದೆ. ಅಲ್ಲಿಯೂ ನಮ್ಮನ್ನು ಒಡೆಯುವ ಪ್ರಯತ್ನ ನಡೆದಿದೆ’ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ‘ಬೆಂಗಳೂರಿನಲ್ಲಿ ಭಾರತವನ್ನು ಕಾಣಬಹುದು. ಅದಕ್ಕಾಗಿಕೆಂಪೇಗೌಡರು ಇಂದಿನ ಎಲ್ಲಾ ಸರ್ಕಾರಗಳಿಗೂ ಆದರ್ಶವಾಗಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ, ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕಸಿ.ರಾಮಚಂದ್ರ ಹಾಗೂ ಬೆಂಗಳೂರುಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ಅವರಿಗೆ ‘ಒಕ್ಕಲಿಗ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.