ಬೆಂಗಳೂರು: ಮೈಸೂರು, ಹುಬ್ಬಳ್ಳಿ, ಮಂಗಳೂರು ಕ್ಲಸ್ಟರ್ಗಳಲ್ಲಿ 12 ತಿಂಗಳಲ್ಲಿ 25ಕ್ಕೂ ಹೆಚ್ಚು ಕಂಪನಿಗಳು ಪ್ರಾರಂಭವಾಗಿದ್ದು, ಬೆಂಗಳೂರಿನ ಹೊರಗೆ ಐಟಿ ಹಾಗೂ ಇತರೆ ಕಂಪನಿಗಳ ಆಸಕ್ತಿ ವೃದ್ಧಿಯಾಗುತ್ತಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಅಧ್ಯಕ್ಷ ಬಿ.ವಿ. ನಾಯ್ಡು ಹೇಳಿದರು.
ಬೆಂಗಳೂರು ಟೆಕ್ ಸಮಿಟ್ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಬಿಯಾಂಡ್ ಬೆಂಗಳೂರು ಟ್ರ್ಯಾಕ್: ಸಕ್ಸಸ್ ಆ್ಯಂಡ್ ರೋಡ್ ಮ್ಯಾಪ್ ಬಿಯಾಂಡ್ ಬೆಂಗಳೂರು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ಹೊರತಾಗಿಯೂ ಕಂಪನಿಗಳು ಹೆಚ್ಚಿನ ಆಸಕ್ತಿ ತೋರುತ್ತಿವೆ.ಮೈಸೂರು, ಹುಬ್ಬಳ್ಳಿ, ಮಂಗಳೂರು ಕ್ಲಸ್ಟರ್ಗಳಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಕಾರ್ಯಾರಂಭ ಮಾಡುವ ಸಾಲಿನಲ್ಲಿವೆ. ಮೈಸೂರು– ಸೈಬರ್ ಸೆಕ್ಯುರಿಟಿ, ಇಎಸ್ಡಿಎಂ; ಹುಬ್ಬಳ್ಳಿ–ಧಾರವಾಡ– ಬೆಳಗಾವಿ– ಅಗ್ರಿಟೆಕ್, ಇಎಸ್ಡಿಎಂ, ಎಐ ಹಾಗೂ ಮಂಗಳೂರು ಕ್ಲಸ್ಟರ್ನಲ್ಲಿ ಫಿನ್ಟೆಕ್, ಹೆಲ್ತ್ಟೆಕ್ ತಾಣಗಳಾಗಲಿವೆ’ ಎಂದರು.
‘ಈ ಮೂರು ಕ್ಲಸ್ಟರ್ಗಳಿಂದ ಮುಂದಿನ ಐದು ವರ್ಷಗಳಲ್ಲಿ ₹5 ಶತಕೋಟಿ ಹಾಗೂ 10 ವರ್ಷಗಳಲ್ಲಿ ₹10 ಶತಕೋಟಿ ವಹಿವಾಟು ಆಗಲಿದೆ. ಸುಮಾರು 10 ಲಕ್ಷ ಉದ್ಯೋಗ ಲಭಿಸಲಿವೆ. ಐಬಿಎಂ ಸಂಸ್ಥೆ ಮೈಸೂರಿನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಇದೇ ರೀತಿ ಹಲವು ಐಟಿ ಕಂಪನಿಗಳು ತಮ್ಮ ಹಬ್ಗಳನ್ನು ಬೆಂಗಳೂರಿನಲ್ಲಿಟ್ಟುಕೊಂಡು ಸ್ಪೋಕ್ಸ್ಗಳನ್ನು ಕ್ಲಸ್ಟರ್ಗಳಿಗೆ ಸ್ಥಾಪಿಸಿದರೆ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದರು.
‘ಮೈಸೂರಿನಲ್ಲಿರುವ ಲಹರಿ– ಕಾಮನ್ ಇನ್ಫ್ರಾಸ್ಟ್ರಕ್ಚರ್ ಫೆಸಿಲಿಟಿಯನ್ನು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ಸ್ (ಇಎಂಸಿ) ಯೋಜನೆಯಡಿ ಒದಗಿಸಿದ್ದು, ಇದು ದೇಶದಲ್ಲೇ ಪ್ರಥಮವಾಗಿದೆ. ಆರ್ ಆ್ಯಂಡ್ ಡಿ ನೀಡಿ ಪ್ರಕಟವಾಗಿದ್ದು, ಇದನ್ನು ಹುಬ್ಬಳ್ಳಿಯ ಕೆಎಲ್ಇ ಟೆಕ್ ರಚಿಸಿದೆ’ ಎಂದು ಮಾಹಿತಿ ನೀಡಿದರು.
‘ಸೆಮಿಕಂಡಕ್ಟರ್ ವಲಯದಲ್ಲಿ ಅತಿ ಹೆಚ್ಚಿನ ಪ್ರಗತಿ ನಿರೀಕ್ಷಿಸಲಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಬೆಂಗಳೂರು ಹೊರತಾಗಿ ಮೈಸೂರು, ಹುಬ್ಬಳ್ಳಿಯಲ್ಲೂ ಇಂಡಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್ಎ) ಸಮ್ಮೇಳನವನ್ನು ಆಯೋಜಿಸಬೇಕು’ ಎಂದು ನಾಯ್ಡು ಅವರು ಐಇಎಸ್ಎ ಅಧ್ಯಕ್ಷ ರಾಜೀವ್ ಖುಷು ಅವರಿಗೆ ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.