ADVERTISEMENT

ಮಾತೃಭಾಷೆಗೆ ಜನರನ್ನು ಒಗ್ಗೂಡಿಸುವ ಶಕ್ತಿ: ಕೆನಡಾ ಸಂಸದ ಚಂದ್ರ ಆರ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದ ಕೆನಡಾ ಸಂಸದ ಚಂದ್ರ ಆರ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:22 IST
Last Updated 13 ಜುಲೈ 2022, 19:22 IST
ಚಂದ್ರ ಆರ್ಯ ಅವರಿಗೆ ಮಹೇಶ ಜೋಶಿ ಅವರು ಸದಸ್ಯತ್ವ ಪತ್ರ ಹಸ್ತಾಂತರಿಸಿದರು. ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಟೇಲ್‌ಪಾಂಡು, ಸಂಗೀತಾ ಗಾಯತ್ರಿ, ಶ್ರೀನಿವಾಸ್ ಹಾಗೂ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಇದ್ದಾರೆ.
ಚಂದ್ರ ಆರ್ಯ ಅವರಿಗೆ ಮಹೇಶ ಜೋಶಿ ಅವರು ಸದಸ್ಯತ್ವ ಪತ್ರ ಹಸ್ತಾಂತರಿಸಿದರು. ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಟೇಲ್‌ಪಾಂಡು, ಸಂಗೀತಾ ಗಾಯತ್ರಿ, ಶ್ರೀನಿವಾಸ್ ಹಾಗೂ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಇದ್ದಾರೆ.   

ಬೆಂಗಳೂರು: ‘ಜಾತಿ, ಮತ, ಪಂಥ ಹಾಗೂ ಧರ್ಮಗಳ ಕಟ್ಟುಪಾಡುಗಳನ್ನು ಮೀರಿ, ಏಕಸೂತ್ರದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮಾತೃಭಾಷೆಗಿದೆ’ ಎಂದು ಕೆನಡಾ ಸಂಸದ ಚಂದ್ರ ಆರ್ಯ ತಿಳಿಸಿದರು.

ಇತ್ತೀಚೆಗೆ ಕೆನಡಾ ಸಂಸತ್ತಿನಲ್ಲಿ ಕನ್ನಡ ಭಾಷಣ ಮಾಡಿದ್ದ ಅವರು, ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು, ಪರಿಷತ್ತಿನ ಸದಸ್ಯತ್ವ ಪಡೆದುಕೊಂಡರು. ಅವರ ಪತ್ನಿ ಸಂಗೀತಾ ಗಾಯತ್ರಿ ಹಾಗೂ ಸಹೋದರ ಶ್ರೀನಿವಾಸ್ ಅವರಿಗೂ ಸದಸ್ಯತ್ವ ನೀಡಲಾಯಿತು.

ಇಲ್ಲಿನ ಪಂಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಪರಿಷತ್ತಿನ ಕಾರ್ಯಚಟುವಟಿಕೆಗಳ ಬಗ್ಗೆ ಚಂದ್ರ ಆರ್ಯ ಅವರಿಗೆ ಮಾಹಿತಿ ನೀಡಿದರು.

ADVERTISEMENT

ಬಳಿಕ ಮಾತನಾಡಿದಚಂದ್ರ ಆರ್ಯ, ‘ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯಚಟುವಟಿಕೆಗಳು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಗಟ್ಟಿಗೊಳಿಸುವಂತಹದ್ದಾಗಿದೆ. ತಂದೆಯವರು ಸರ್ಕಾರಿ ಸೇವೆಯಲ್ಲಿದ್ದಾಗ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ರೂಪಿಸುವಲ್ಲಿ ಕಾರ್ಯಯೋಜನೆ ಕೈಗೊಂಡಿದ್ದರು. ಕೆನಡಾದಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸಿ, ಪರಿಷತ್ತಿನ ಘಟಕವನ್ನು ರಚಿಸಿ, ಅದನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ಮಹೇಶ ಜೋಶಿ ನೀಡಿದ್ದಾರೆ. ಇದನ್ನುನನ್ನ ಕರ್ತವ್ಯ ಎಂದು ನಿಭಾಯಿಸುತ್ತೇನೆ’ ಎಂದು ತಿಳಿಸಿದರು.

ಮಹೇಶ ಜೋಶಿ, ‘ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದ ಚಂದ್ರ ಆರ್ಯ ಅವರು, ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿರುವುದು ಹಾಗೂ ಕೆನಡಾದಲ್ಲಿ ಪರಿಷತ್ತಿನ ಘಟಕದ ಮುಂದಾಳತ್ವ ವಹಿಸಿಕೊಂಡಿರುವುದು ಶ್ಲಾಘನೀಯ. ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವುದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.