ರಾಜರಾಜೇಶ್ವರಿನಗರ: ಸಭೆಗೆ ಬರುವಾಗ ಸಂಬಂಧಿಸಿದಂತೆ ಮಾಹಿತಿಯೊಂದಿಗೆ ಬರಬೇಕು. ಕಾಟಾಚಾರಕ್ಕೆ ಸಭೆಗೆ ಏಕೆ ಬರುತ್ತೀರಿ. ನಿಯತ್ತಿನಿಂದ ಅಭಿವೃದ್ಧಿ ಕೆಲಸಗಳನ್ನು ಏಕೆ ಮಾಡುತ್ತಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಾಜರಾಜೇಶ್ವರಿನಗರದ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನೀವು ಹೇಳುವ ಕಥೆ ಕೇಳುವುದಕ್ಕೆ ನಾವು ಬಂದಿಲ್ಲ. ಯಾವ ಕೆಲಸವಾಗಿದೆ, ಮುಂದೆ ಯಾವ ಯಾವ ಕಾಮಗಾರಿ ಕೈಗೊಳ್ಳಬೇಕು, ಯಾವ್ಯಾವ ವಾರ್ಡ್ನಲ್ಲಿ ಕಾಮಗಾರಿ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಬಿಬಿಎಂಪಿ ಸದಸ್ಯರ ಗಮನಕ್ಕೆ ತನ್ನಿ. ಪ್ರಗತಿಯಲ್ಲಿರುವ ಕೆಲಸಗಳನ್ನು ನನ್ನ ಗಮನಕ್ಕೂ ತನ್ನಿ’ ಎಂದು ಸೂಚಿಸಿದರು.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬಂದಿರುವ ‘ಡಯಾಲಿಸಿಸ್ ಕೇಂದ್ರಕ್ಕೆ ಚಿಕಿತ್ಸೆ ಬೇಕಿದೆ’ ಎಂಬ ವರದಿ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು. ಆಗ ಜ್ಞಾನಭಾರತಿ ವಾರ್ಡ್ನ ಸದಸ್ಯೆ ಜಿ.ಡಿ.ತೇಜಸ್ವಿನಿ ಸೀತಾರಾಮಯ್ಯ, ‘ನನ್ನ ವಾರ್ಡ್ಗೆ ಮಂಜೂರಾಗಿದ್ದ ಡಯಾಲಿಸಿಸ್ ಕೇಂದ್ರವನ್ನು ಪಕ್ಕದ ವಾರ್ಡ್ಗೆ ಸ್ಥಳಾಂತರಿಸಲಾಗಿದೆ’ ಎಂದು ದೂರಿದರು. ಆಗ ಸುರೇಶ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಗೆ ತಡವಾಗಿ ಬಂದ ಘನತ್ಯಾಜ್ಯ ವಿಭಾಗದ ಸೂಪರಿಂಟೆಂಡಿಂಗ್ ಎಂಜಿನಿಯರ್ ಮಧುಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.