ಬೆಂಗಳೂರು:ಈ ಹಿಂದೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿಬಿಜೆಪಿ ಅಭ್ಯರ್ಥಿಯಾಗಿದ್ದ ವೇಳೆ ನೀತಿ ಚುನಾವಣಾ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ವಿಧಾನಪರಿಷತ್ ಸದಸ್ಯ ಪಿ.ಎಂ.ಮುನಿರಾಜುಗೌಡ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಹಾರೋಹಳ್ಳಿ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದ್ದ ಪ್ರಕರಣದ ರದ್ದತಿ ಕೋರಿ ಮುನಿರಾಜುಗೌಡ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ರದ್ದುಗೊಳಿಸಿ ಆದೇಶಿಸಿತು.
‘2014ರ ಲೋಕಸಭಾ ಚುನಾವಣೆ ವೇಳೆ ಮುನಿರಾಜುಗೌಡ, ಕನಕಪುರ ತಾಲ್ಲೂಕು ಮರಳವಾಡಿ ಹೋಬಳಿ ಗ್ರಾಮದಲ್ಲಿ 2014ರ ಏಪ್ರಿಲ್ 4ರಂದುಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡುತ್ತಿದ್ದರು. ಈ ಕರಪತ್ರಗಳಲ್ಲಿ ಹಳೆಯ ದಿನಾಂಕವಾದ 2014 ಏಪ್ರಿಲ್ 27 ಅನ್ನು ನಮೂದು ಮಾಡಲಾಗಿತ್ತು’ ಎಂದು ಸ್ಥಳೀಯ ಚುನಾವಣಾಧಿಕಾರಿ ಪ್ರಕರಣ ದಾಖಲಿ ಸಿದ್ದರು. ಒಟ್ಟು 350 ಕರಪತ್ರ ವಶಪಡಿಸಿಕೊಂಡಿದ್ದ ಚುನಾವಣಾಧಿಕಾರಿಯು, ಚುನಾವಣೆ ನಿಯಮ ಉಲ್ಲಂಘನೆ ಆರೋಪ ಹೊರಿಸಿ ಜನತಾ ಪ್ರಾತಿನಿಧ್ಯ ಕಾಯ್ದೆ–1951ರ ಕಲಂ 127 ಎ ಅಡಿಯಲ್ಲಿ ಈ ಪ್ರಕರಣ ದಾಖಲಿಸಿದ್ದರು.
ಮತ್ತೊಂದು ಪ್ರಕರಣ: 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಎಂ. ಮುನಿರಾಜುಗೌಡ ಪರ ಕೆಲ ಯುವಕರು ‘ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನೂ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ ವೇಳೆ ಮಂಗಳವಾರ ರದ್ದುಗೊಳಿಸಿದೆ.
‘ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯ ಎಚ್ಎಂಟಿ ಲೇಔಟ್ನ ಚೌಡೇಶ್ವರಿ ದೇವಾಲಯದ ಬಳಿ ಮುನಿರಾಜುಗೌಡ ಪರ ಸಂತೋಷ್, ಮಾರುತಿ, ಚೇತನ್ ಕುಮಾರ್, ಮಂಜುನಾಥ್ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಲಾಗಿತ್ತು. ‘ಅಭ್ಯರ್ಥಿ ಪರ ಪ್ರಚಾರ ನಡೆಸುವವರು2018ರ ಮೇ 26ರಂದೇ ಮತಕ್ಷೇತ್ರ ಬಿಟ್ಟು ತೆರಳು ವಂತೆ ಸೂಚಿಸಿದ್ದರೂ ಈ ನಾಲ್ವರು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಪ್ರಚಾರ ನಡೆಸಿದ್ದಾರೆ’ ಎಂದು ಆರೋಪಿಸಲಾಗಿತ್ತು.
ಎರಡೂ ಪ್ರಕರಣಗಳಲ್ಲಿ ಮುನಿರಾಜುಗೌಡರ ಪರ ವಕೀಲ ಧರಣೇಶ್, ‘ಈ ಪ್ರಕರಣಗಳನ್ನು ಸಂಪೂರ್ಣ ರಾಜಕೀಯ ಪ್ರೇರಿತವಾಗಿ ದಾಖಲಿಸಲಾಗಿದೆ’ ಎಂದುವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.