ಬೆಂಗಳೂರು: ಕಸ್ತೂರಿನಗರದ ಕಂಪನಿಯೊಂದರ ಮೇಲ್ವಿಚಾರಕ ರವಿಕುಮಾರ್ (26) ಎಂಬುವರನ್ನು ಕೊಲೆ ಮಾಡಲಾಗಿದ್ದು, ಮಾರತ್ತಹಳ್ಳಿಯ ಶೆಡ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
‘ಜಾರ್ಖಂಡ್ನ ರವಿಕುಮಾರ್, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಕೆಲಸಕ್ಕೆ ಸೇರಿದ್ದರು. ಅವರ ಕೈ ಕೆಳಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸಂಜೀತ್ ಎಂಬಾತನೇ ಕೊಲೆ ಮಾಡಿರುವ ಅನುಮಾನವಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ವೈಟ್ಫೀಲ್ಡ್ ಉಪವಿಭಾಗದ ಡಿಸಿಪಿ ಅಬ್ದುಲ್ ಅಹದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರವಿಕುಮಾರ್ ಹಾಗೂ ಸಂಜೀತ್, ಒಂದೇ ಊರಿನವರು. ಮಾರತ್ತಹಳ್ಳಿಯ ನಿವಾಸಿ ಬಾಬು ರೆಡ್ಡಿ ಎಂಬುವರ ಕೊಠಡಿಯಲ್ಲಿ ಒಟ್ಟಿಗೇ ವಾಸವಿದ್ದರು’ ಎಂದರು.
‘ಮೇ 3ರಂದು ಮಧ್ಯಾಹ್ನ ಸಂಬಂಧಿಕರು, ರವಿಕುಮಾರ್ ಅವರ ಮೊಬೈಲ್ಗೆ ಕರೆ ಮಾಡಿದ್ದರು. ಸ್ವಿಚ್ ಆಫ್ ಆಗಿತ್ತು. ಶೆಡ್ ಬಳಿ ಹೋಗಿ ವಿಚಾರಿಸುವಂತೆ ನಗರದಲ್ಲಿದ್ದ ಸಂಜೀವ್ಕುಮಾರ್ ಎಂಬುವರಿಗೆ ಹೇಳಿದ್ದರು. ಅವರು ಶೆಡ್ ಬಳಿ ಹೋದಾಗಲೇ ಮೃತದೇಹ ಕಂಡಿತ್ತು’ ಎಂದು ಹೇಳಿದರು.
‘ಕೊಲೆಯಾದ ರವಿಕುಮಾರ್ ಅವರ ಮೂಗು, ಬಾಯಿ ಹಾಗೂ ತಲೆಯ ಹಿಂಭಾಗದಲ್ಲಿ ಗಾಯವಾಗಿದೆ. ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.