ಬೆಂಗಳೂರು: ಕೌಟುಂಬಿಕ ಕಲಹದಿಂದಾಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿ ವಿನಯ್ ಕುಮಾರ್ (31) ಎಂಬಾತನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
‘ಬಿಹಾರ ಜಿಲ್ಲೆಯ ಬಾಲಟೋಲ ಗ್ರಾಮದವಿನಯ್, ಪತ್ನಿ ಗೀತಾದೇವಿ ಅವರನ್ನು ಕೊಲೆ ಮಾಡಿದ್ದ. ಆ ಸಂಬಂಧ ಮೃತರ ಸಹೋದರಗುಡ್ಡುಭಾಗತ್ ನೀಡಿದ್ದ ದೂರಿನನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ವಿನಯ್,ರಾಮಮೂರ್ತಿನಗರ ಬಳಿಯ ಹೊರಮಾವು ಮುಖ್ಯರಸ್ತೆಯಲ್ಲಿರುವ ಪ್ರೇರಣಾ ಟ್ರಾ ಕ್ಯೂಲ್ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಸೇರಿದ್ದ. ಅಲ್ಲಿಯೇ ಮನೆಯೊಂದರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಯಲ್ಲಿ ವಾಸವಿದ್ದ. ದಂಪತಿ ನಡುವೆ ನಿತ್ಯವೂ ಜಗಳ ಆಗುತ್ತಿತ್ತು’ ಎಂದು ಹೇಳಿದರು.
‘ಮನೆ ಖರ್ಚು ಹಾಗೂ ಮಕ್ಕಳ ಪಾಲನೆಗೆ ಆರೋಪಿ ಹಣ ಕೊಡುತ್ತಿರಲಿಲ್ಲ. ಪತ್ನಿ ಹಣ ಕೇಳಿದರೆ, ಅವರ ಮೇಲೆಯೇ ಹಲ್ಲೆ ಮಾಡುತ್ತಿದ್ದ. ಜೊತೆಗೆ ಕೊಲೆ ಬೆದರಿಕೆಯನ್ನೂ ಒಡ್ಡುತ್ತಿದ್ದ’ ಎಂದರು.
ಪಾರ್ಕಿಂಗ್ ಜಾಗಕ್ಕೆ ಶವ ತಂದ: ‘ಜ. 13ರಂದು ರಾತ್ರಿ ಪತ್ನಿ ಜೊತೆ ಜಗಳ ತೆಗೆದಿದ್ದ ಆರೋಪಿ, ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದ. ಶವವನ್ನು ಅಪಾರ್ಟ್ಮೆಂಟ್ ಸಮುಚ್ಚಯದ ವಾಹನ ನಿಲುಗಡೆ ಸ್ಥಳಕ್ಕೆ ತಂದಿದ್ದ. ಅಲ್ಲಿಯೇ ಶವದ ಮೇಲೆ ಕಲ್ಲು ಎತ್ತಿಹಾಕಿದ್ದ’ ಎಂದು ಪೊಲೀಸರು ಹೇಳಿದರು.
‘ಗೀತಾದೇವಿಯವರ ಸಹೋದರ, ಬೆಂಗಳೂರಿನಲ್ಲಿ ವಾಸವಿದ್ದಾರೆ. ಶವ ಕಂಡಿದ್ದ ನಿವಾಸಿಯೊಬ್ಬರು, ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆರಂಭದಲ್ಲಿ ಅಪರಿಚಿತರು ಕೊಲೆ ಮಾಡಿರಬಹುದು ಎಂಬ ಶಂಕೆ ಇತ್ತು. ಸಂಬಂಧಿಕರು ನೀಡಿದ್ದ ಮಾಹಿತಿಯಂತೆ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತಪ್ಪೊಪ್ಪಿಕೊಂಡ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.